Wednesday, 16 October 2013

ಸಬ್ ಎಡಿಟರ್ ಸುಬ್ರಾಯನ ಮರುಜನ್ಮ... (ಸಬ್ ಎಡಿಟರ್ ಸುಬ್ರಾಯ ಸತ್ತಮೇಲೆ ಭಾಗ-2)

ದೊಪ್ ಎಂದು ಯಾವುದೋ ರಾಶಿಯ ಮೇಲೆ ಬಿದ್ದದ್ದೊಂದೇ ಗೊತ್ತು. ಆ ಮಗು ಒಂದೇ ಸಮನೆ ಅಳತೊಡಗಿತು. ಅತ್ತು ಸುಸ್ತಾಗಿ ಕೊನೆಗೆ ತಾನು ಬಿದ್ದ ಜಾಗವನ್ನೊಮ್ಮೆ ಸವರಿ ನೋಡಿತು. ನಯವಾದದ್ದು. ಬೀಸುವ ಗಾಳಿಗೆ ಪಟಪಟನೆ ಆ ರಾಶಿ ಸದ್ದಾಗುತ್ತಿದೆ. ತಾನು ಬಿದ್ದಿರುವುದು ಬೃಹತ್ ಪೇಪರ್ ರಾಶಿಯ ಮೇಲೆ. ಅದೂ

ರದ್ದಿ. ಆಗಲಿ, ಅದ್ಯಾರೋ ಎಸೆದ ನನ್ನ ದೇಹದ ಪಾರ್ಟ್‌ಗಳು ಚದುರದಂತೆ ರಕ್ಷಿಸಿತಲ್ಲಾ ಇದೇ ಪತ್ರಿಕೆಯ ರಾಶಿ. ಸುಸ್ತಿನಲ್ಲೂ ಒಂದು ನಿಟ್ಟುಸಿರು ಹೊರಟಿತು ಆ ಮಗುವಿನ `ಭಯಂಕರ' ಸೂಕ್ಷ್ಮ ನಾಸಿಕದಿಂದ.
  ಅರೇ ಏ ದೇಖ್ ಭೈಯಾ. ಪೇಪರ್ ಬಂಡಲ್ ಮೇ ಬಚ್ಚಾ ಹೈ. ಅಬ್ ಹೀ ಪೈದಾ ಹುವಾ ಹೈ. ಕೇಳಿತೊಂದು ಆರ್ದ್ರ ಹೃದಯದ ಧ್ವನಿ. ರದ್ದಿ ಪೇಪರ್ ಆಯುವ ಹುಡುಗರ ಕೈಗೆ ಮಗು ಸಿಕ್ಕಿತು.
***   ***   ***   ***   ***
ಪತ್ರಿಕೆ ರಾಶಿ ಮಧ್ಯೆ ನವಜಾತ ಶಿಶು ಪತ್ತೆ. ಹೆಚ್ಚುಕಡಿಮೆ ಎಲ್ಲಾ ಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಪ್ರಕಟವಾದವು. ಕೆಲವಂತೂ ಕೋಳಿಗಳ ಥರ ಜನ್ಮ ಮೂಲ ಕೆದಕಲುತೊಡಗಿದವು.
*** *** *** *** ***
 ಮಗು ಅದೇ ಹುಡುಗರ ಕೊಳೆಗೇರಿಯಲ್ಲಿ ಬೆಳೆಯಿತು. ಸರ್ವ ಜನಾಂಗದ ಶಾಂತಿಯ ತೋಟದ ವಿಶ್ವಮಾನವನಾಗಿ.
ಸುಟ್ಟೂರು ಸಮೀಪ ಭಾರೀ ಗಾತ್ರದ ಪೇಪರ್ ರಾಶಿಯ ನಡುವೆ ಸಿಕ್ಕ ಮಗುವಿಗೆ ಸುಬ್ರಾಯ ಎಂದು ಹೆಸರಿಸಲಾಯಿತು. ಊರು ಗೊತ್ತಿಲ್ಲ. ಕೇರಿ ಇಲ್ಲ.
ಆತ ಸುಬ್ರಾಯ ಸಬ್ ಎಡಿಟರ್ ಸುಬ್ರಾಯ. ಯಮನಿಂದ ವರಸಹಿತ ಶಾಪ ಪಡೆದು, ಪತ್ರಿಕಾ ರಾಶಿಯ ಮೇಲೆ ಪುನರ್ಜನ್ಮ ಪಡೆದ, ಹುಟ್ಟುತ್ತಲೇ ಎಲ್ಲಾ ಮಾಧ್ಯಮಗಳಲ್ಲೂ ಸುದ್ದಿಯಾಗಿಯೇ ಕಾಣಿಸಿಕೊಂಡ ಸುಬ್ರಾಯ.
ಬಾಲ್ಯದಲ್ಲಿ ಅಷ್ಟಿಷ್ಟು ಓದುವ ಗೀಳು. ಚಂದಮಾಮನಿಂದ ಹಿಡಿದು, ರತಿ ವಿಜ್ಞಾನದವರೆಗೆ. ಎಲ್ಲಕ್ಕಿಂತ ಮಿಗಿಲಾಗಿ ಆತ ಪಡೆದದ್ದು ಲೋಕಾನುಭವ ಶಿಕ್ಷಣ. ಅವರಿವರ ಮನೆಯಲ್ಲಿ ಬೆಳೆಯುವಾಗ, ಅವರ ಮನೆ ಕಥೆ ಇವರಿಗೆ, ಇವರದ್ದು ಅವರಿಗೆ ಹೇಳುವ, ಮೂಲಕ ಎಲ್ಲರ ಮನೆ ದೋಸೆಯೂ ತೂತೇ ಎಂಬುದನ್ನು ಇಡೀ ಕೇರಿಗೆ ತೋರಿಸಿಬಿಟ್ಟ. ಒಂದು ವಿಷಯವನ್ನು ಯಥಾವತ್ತಾಗಿ ಇನ್ನೊಬ್ಬರಿಗೆ ಹೇಳುವ ಕಲೆ ಅವನಿಗೆ ಕರಗತವಾಗಿತ್ತು. ಅವನೇ ಆ ಕೇರಿಯಲ್ಲೊಂದು ಪ್ರಭಾವೀ ನ್ಯೂಸ್ ಚಾನೆಲ್ ಆಗಿ ಬೆಳೆದಿದ್ದ. ಸ್ವಲ್ಪಕಾಲ ಕಾಲೇಜು ಸೇರಿ ಅಲ್ಲಿಯೂ ಕಾಲಹರಣ ಮಾಡಿದ. ಅಲ್ಲಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.
  ಒಂದು ಜಾತಿಯಿಲ್ಲ, ಕತೆಯಿಲ್ಲ. ಮೇಲೂ ಅಲ್ಲ, ಕೆಳಗೂ ಅಲ್ಲ. ಒಂದು `ಬೆಲ್ಟ್' ಅಂತಂದ್ರೇನು ಗೊತ್ತಿಲ್ಲ. ಜಾತಿಯಿಲ್ಲದವನಿಗೆ ಈ ದೇಶದಲ್ಲಿ ಉದ್ಯೋಗ ಬಿಡಿ. ರೈಲ್ವೆ ರಿಸರ್ವೇಷನ್ ಕೂಡಾ ಸಿಗುವುದಿಲ್ಲ. ಅಂಥವನಿಗೆ ಯಾರು ಕೆಲಸ ಕೊಡ್ತಾರೆ. ಸುಬ್ರಾಯ ಕೆಲಸಕ್ಕೆ ಅಲೆದಲೆದು ಸುಸ್ತಾದ.
ಆದರೇನಂತೆ ಯಮ ಶಾಪ ಸುಳ್ಳಾಗುವುದೇ? ಅದ್ಯಾವುದೋ ಅನಿವಾರ್ಯತೆಯ ಬಿರುಗಾಳಿ ಆತನನ್ನು ಪತ್ರಿಕಾ ಕಚೇರಿಯೊಳಗೇ ತಂದುಹಾಕಿತು.
ಹುಟ್ಟಿದಾಗ ಅದ್ಯಾರೋ ಎಸೆದ ತನ್ನ ದೇಹಕ್ಕೆ ಒಂದಿನಿತೂ ನೋವಾಗದಂತೆ ರಕ್ಷಿಸಿದ್ದು ಪತ್ರಿಕೆ ರಾಶಿಯೇ ಅಲ್ಲವೇ. ಹಾಗಾದರೆ ಬದುಕು ಕೊಡಬೇಕಾದದ್ದೂ ಅದೇ. ಇದೇ ನನ್ನ ಕರ್ಮಭೂಮಿ ಅಂದುಕೊಂಡು ಸಮಾಧಾನ ತಂದುಕೊಂಡ ಸುಬ್ರಾಯ.
*** *** *** *** *** *** *** ***
ಎಂದಿನಂತೆ ವಿಕ್ರಮನ ಹೆಗಲಿನಿಂದ ತಪ್ಪಿಸಿಕೊಂಡ ಬೇತಾಳವು ಅಭ್ಯಾಸಬಲದಿಂದ ಪಿ.ಬಿ. ರಸ್ತೆಯ ರಾಜಭವನ ಬಾರಿನೊಳಗೆ ನುಗ್ಗಿತು. ಅವರಿವರು ಕುಡಿದು ಗ್ಲಾಸಿನ ತಳದಲ್ಲಿ ಉಳಿಸಿದ್ದ ಕೆಲವು ಹನಿಗಳನ್ನು ನೆಕ್ಕಿ ನೆಕ್ಕಿ `ಟೈಟ್' ಆಗತೊಡಗಿತು. ನೆಕ್ಕಿದ್ದೇ ಪಂಚಾಮೃತ ಎಂದು ಭಾವಿಸಿದ ಪ್ರೇತಕ್ಕೆ ಎಲ್ಲಾ ಬ್ರಾಂಡ್‌ಗಳೂ ಡ್ರೈ ಆಗಿಯೇ ಮಿಕ್ಸ್ ಆಗಿದ್ದರಿಂದ ಕಾಕ್‌ಟೇಲ್ ಕುಡಿದ ಅನುಭವವಾಗತೊಡಗಿತು. ಬಾರಿನ ಹುಡುಗರು ಹಾಕಿದ ಸಾಂಬ್ರಾಣಿ ಹೊಗೆಯ ಘಾಟು ತಾಳಲಾರದೇ ಅಲ್ಲಿಂದ ತೂರಾಡುತ್ತಾ ಹೊರಬೀಳಲೇಬೇಕಾಯಿತು.
*** *** *** *** *** ***
ಸರಿಸುಮಾರು ಮಧ್ಯರಾತ್ರಿ. ಬೈಕೊಂದು ನಿಧಾನವಾಗಿ ಆ ರಸ್ತೆಯಲ್ಲಿ ಬಂತು. ಪಿ.ಬಿ. ರಸ್ತೆಯ ಹೊಂಡಗಳೆಂಬೋ ಸ್ಪೀಡ್‌ಬ್ರೇಕರ್ ಮಧ್ಯೆ ಗಜಕ್ಕನೆ ಸಿಕ್ಕಿಹಾಕಿಕೊಂಡ ವಾಹನ ಜಪ್ಪಯ್ಯವೆಂದರೂ ಮೇಲೇಳಲಿಲ್ಲ. ಇದ್ದಕ್ಕಿದ್ದಂತೆ ಬೀದಿ ದೀಪಗಳೂ ಆರಿಹೋದವು. ಸವಾರ ಮೆಲ್ಲನೇ ಇಳಿದು ಏನಾಯ್ತಪ್ಪಾ ಅಂತ ನೋಡಲು ಬಗ್ಗಿದ. ಆತ ಸುಬ್ರಾಯ. ಸಬ್ ಎಡಿಟರ್ ಸುಬ್ರಾಯ.
ಥಟ್ಟನೆ ವಿಕಟ ನಗೆಯೊಂದು ಕೇಳಿಬಂತು. ಹಿಹ್ಹಿಹ್ಹೀ...ಹ್ಹಿ ಹ್ಹಿ ಹ್ಹೀ...
ಸುಬ್ರಾಯ ಸುತ್ತಲೂ ನೋಡಿದ. ಅರೇ ಯಾರೂ ಇಲ್ಲ. ಆದ್ರೆ ಈ ಸೌಂಡ್ ಎಫೆಕ್ಟ್ ಮಾತ್ರ ಜೋರಾಗಿಯೇ ಇದೆಯಲ್ಲಾ...  ಆತ ಕಣ್ಣುಜ್ಜಿಕೊಂಡು ಮತ್ತೆ ನೋಡಿದ. ರಸ್ತೆಯ ಮೇಲೆ ಅಸ್ಪಷ್ಟ ಆಕೃತಿಯೊಂದು ಗೋಚರಿಸಿತು.
ಯಾರ್ರೀ ನೀವು? ಎಂದ ಸುಬ್ರಾಯ ಧಿಮಾಕಿನಲ್ಲಿ.
ಆಕೃತಿ ತೂರಾಡುತ್ತಾ ಚಲಿಸಿ ತೊದಲುತ್ತಾ ನುಡಿಯಿತು. `ನಾನು ಬೇತಾಳ. ಬೇತಾಳ ಆಫ್ ಕಿಂಗ್ ವಿಕ್ರಮಾದಿತ್ಯ. ಸ್ಮಶಾನದ ಹತ್ರ ಇರೋ ಹುಣಸೆ ಮರದ ಫ್ಲ್ಯಾಟ್ ನಂ ಎರಡರಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿವರೆಗೆ ನನಗೆ ಡ್ರಾಪ್ ಕೊಡ್ತೀರಾ ಪ್ಲೀಸ್... ಕೇಳಿತು.
ಸುಬ್ರಾಯ ಆತಂಕದಿಂದ ಕೇಳಿದ. ಬೇತಾಳ! ಯೂ ಮೀನ್ ಪ್ರೇತ, ದೆವ್ವ? ಮತ್ತೆ ಸಾವರಿಸಿಕೊಂಡು ನೋಡಿದ.
ಪರ್ವಾಗಿಲ್ಲ. ದಿನವೂ ನಾನು ಸುತ್ತಲೂ ನೋಡುತ್ತಿರುವ ಭಯಾನಕ ಪಾತ್ರಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ ಅನಿಸಿತು. ಸ್ವಲ್ಪ ಧೈರ್ಯಮಾಡಿದ ಸುಬ್ರಾಯ ಜಗ್ಗೇಶ್ ಸ್ಟೈಲಿನಲ್ಲಿ ನುಡಿದ.
ರೆಸ್ಪೆಕ್ಟೆಡ್ ಬೇತಾಳ... ದಿನಾ ನಿನ್ನನ್ನು ವಿಕ್ರಮ ಹೊತ್ತೊಯ್ತಾನೆ. ರಾಜ್ಯಭಾರಕ್ಕಿಂತ ನಿನ್ನ ಭಾರವೇ ಜಾಸ್ತಿಯಾಗಿ ಅವನ ಬೆನ್ನು 45 ಡಿಗ್ರಿ ಬಗ್ಗಿದೆ. ಅಷ್ಟು ಮಾತ್ರವೇ ನಿನ್ನ ಪೀಡೆ. ದಿನವೂ ಅವನಿಗೊಂದು ಡಬ್ಬಾ ಕಥೆ ಹೇಳ್ತೀಯಾ ಮುಗಿಯದ ಮೆಗಾ ಸೀರಿಯಲ್ ಥರ. ಆಮೇಲೆ ತಲೆ ಚಿಟ್ಟು ಹಿಡಿಸೋ ಪ್ರಶ್ನೆ ಕೇಳಿ ಅವನನ್ನೇ ಬ್ಲಾಕ್‌ಮೇಲ್ ಮಾಡಿ ಹಾರಿ ಹೋಗ್ತೀಯಾ. ಪಾಪ ಆತ ಮತ್ತೆ ನಿನ್ನನ್ನು ಹುಡ್ಕೊಂಡು ಬರ್ತಾನೆ. ಅವನ ಕರ್ಮ. ನೀನು ಯಾಕೆ ಯಡಿಯೂರಪ್ಪ, ರೆಡ್ಡಿ ಅಥವಾ ದೇವೇಗೌಡ್ರಿಗೋ ತಗುಲಿಕೊಳ್ಳಬಾರದು? ನೋಡು ನಿನ್ನನ್ನು ಹೊತ್ಕೊಂಡು ಹೋಗೋದಂತೂ ಆಗದು. ನನ್ನ ಗಾಡಿಯೂ ಕೆಟ್ಟಿದೆ. ನೀನು ಕುಡಿದಿದ್ದೀ ಬೇರೆ. ಯಾವುದಾದರೂ ಆಟೋ ಬಂದ್ರೆ ಹತ್ಕೊಂಡು ಹೋಗು ಎಂದ.
ಪ್ರೇತ ಕೇಳಿತು. ರೀ ಮಿಸ್ಟರ್ ನಿಮ್ಮ ಹೆಸರು?
ಸುಬ್ರಾಯ. ಸಬ್ ಎಡಿಟರ್ ಸುಬ್ರಾಯ. ಪ್ರೆಸ್‌ನವನು ಎಂದ ಗತ್ತಿನಿಂದ.
ಹೋ... ಪ್ರೆಸ್‌ನವರಾ ಗೊತ್ತಾಗ್ಲಿಲ್ಲ... ಸಾರಿ, ಅಂದ್ರೆ ನೀವೂ ನನ್ನ(ಪ್ರೇತದ) ಹಾಗೇ ಅನ್ನಿ.
ಸುಬ್ರಾಯ ಹೇಳಿದ. ನೀನು ಯಾರೋ ಏನೋ ಗೊತ್ತಿಲ್ಲ. ಬೈಕ್ ಹಾಳಾಗಿದೆ. ಡ್ರಾಪ್ ಕೊಡೋಕೆ ಆಗಲ್ಲ.
ಪ್ರೇತ ಹೇಳಿತು. ಹಾಗಾದ್ರೆ. ನಾನೇ ರಿಪೇರಿ ಮಾಡ್ತೀನಿ ಎಂದು ತಾನೇ ಕಿತ್ತು ಹಾಕಿದ್ದ ಸ್ಪಾರ್ಕ್ ಪ್ಲಗ್ಗನ್ನು ಮತ್ತೆ ಜೋಡಿಸಿತು.
ಎಲಾ ಕಂತ್ರಿ ಪ್ರೇತವೇ... ಕೋಪ ಬಂದರೂ ಸುಮ್ಮನಾದ ಸುಬ್ರಾಯ. ಈಗ ಹೊತ್ತೊಯ್ಯಲೇಬೇಕಾದ ಪರಿಸ್ಥಿತಿ. ಸರಿ ಕುಳಿತುಕೋ ಎಂದ. ಬೈಕು ನಿಧಾನವಾಗಿ ಹೊರಟಿತು.
*** *** *** *** ***
ಬೇತಾಳ ಹರಟತೊಡಗಿತು. ಅದೂ ಇದೂ ಅಧಿಕ ಪ್ರಸಂಗ ಮಾತನಾಡಿ, ಸುಬ್ರಾಯನ ಕಡೆಗೇ ಹೊರಳಿತು. ಅವನ ಮಾತು ಅದುವರೆಗಿನ ವಿವಿಧೆಡೆಯ ವೃತ್ತಿ ಬದುಕನ್ನು ಆಧರಿಸಿಯೇ ಹೇಳಿದ್ದು. ಸಂಕ್ಷಿಪ್ತ ಸಂದರ್ಶನ ಹೀಗಿದೆ.

*ರೀ ಸುಬ್ರಾಯ ನೀವು ಕೆಲ್ಸ ಮಾಡೋ ಪತ್ರಿಕೆ ಯಾವುದು? 

`ಬೌಬೌ' ಅಂತ ಹೆಸರು.

*ಬೌಬೌ ನಾ ಅದ್ಯಾಕ್ರೀ ಅಂಥ ಹೆಸರು?

ನಾವೇ ಹೇಳ್ಕೊಳ್ತೀವಲ್ಲಾ ಪತ್ರಿಕೆ ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ. ಹಾಗೆಂದು ಯಾರಾದ್ರು ನಾಯಿ ಹೆಸರನ್ನ ಪೇಪರ್‌ಗೆ ಇಡ್ತಾರಾ? ನಮ್ಮನ್ನೇ ನಾಯಿಗೆ ಹೋಲಿಸ್ಕೊಂಡ ನಾವು ಅದು ಬೊಗಳುವ ಧ್ವನಿಯನ್ನೇ ಪತ್ರಿಕೆಗೆ ಯಾಕಿಡಬಾರದು? ನಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವೇನಲ್ಲವಲ್ಲ... ಹಾಗಾಗಿ ಈ ಹೆಸರು ಡಿಫರೆಂಟ್. ಮಾರುಕಟ್ಟೆ ತಂತ್ರವೂ ಹೌದು.

*ಪತ್ರಿಕೆ ಕೆಲಸ ಅಂದ್ರೆ ಹೇಗೆ?

ವೇಶ್ಯಾವಾಟಿಕೆಯ ಹಾಗೆ. ಜನಸಾಮಾನ್ಯರು, ಕಳ್ಳರು, ಪೊಲೀಸರು, ಬಾಯಿಬಡಕರು, ಅತೃಪ್ತರು, ರಾಜಕಾರಣಿಗಳು, ಎಲ್ಲರೂ ಬಳಸಿಕೊಳ್ತಾರೆ. ಬೇಡಾದಾಗ ಬಿಸಾಡ್ತಾರೆ. ಏಡ್ಸ್ ಬಂದ್ರೆ( ಸುದ್ದಿ ಉಲ್ಟಾ ಹೊಡೆದು ವಿವಾದ ಆದ್ರೆ) ಎಲ್ಲಾ ಈ ....ಮಕ್ಳಿಂದಾನೇ ಆಗಿದ್ದು ಅಂತ ಬೈಕೋತಾರೆ. ಕೃತಜ್ಞತೆಯಿಲ್ಲದ ಜನ.
ನಾವೂ ಅಷ್ಟೇ `ಗಿರಾಕಿ' ಒಳ್ಳೆಯವನೋ ಕೆಟ್ಟವನೋ ನೋಡುವುದಿಲ್ಲ. ಆ ದಿನ ಪುಟ ತುಂಬಬೇಕು. ವಿಷಯ, ಮೌಲ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಷ್ಟೋ ವೇಳೆ ಸಮಾಜದಲ್ಲಿ ನಾಯಿ, ಬೆಕ್ಕಿನ ಜಾಗದಲ್ಲಿರಬೇಕಾದವರನ್ನು ಅಟ್ಟಕ್ಕೇರಿಸಿಬಿಡುತ್ತೇವೆ.
ಉದ್ಯೋಗ ಪರಿಸ್ಥಿತಿಯೂ ಅಷ್ಟೇ. ನಮ್ಮ ಕಷ್ಟಸುಖ ಜನರಿಗಾಗಲೀ, ಮಾಲೀಕರಿಗಾಗಲೀ ಬೇಕಾಗಿರುವುದಿಲ್ಲ. ನಮ್ಮಿಂದ `ಸುಖ' ಪಡೆಯುವುದಷ್ಟೇ ಎಲ್ಲರ ಗುರಿಯಾಗಿರುತ್ತದೆ. ಹಾಗಾಗಿ ನಮಗೊಂದು ಬದುಕು ಇದೆ ಎಂಬುದನ್ನೂ ಮರೆತು ಎಲ್ಲವನ್ನೂ ನುಂಗಿ ಸಹಿಸಿಕೊಳ್ಳಬೇಕು.

*ಕೆಲಸದಲ್ಲಿ ನಿಮ್ಮ ಬಾಸ್‌ನ್ನು ಹೇಗೆ ಖುಷಿಪಡಿಸುತ್ತೀರಿ?

-ಅಂಥದ್ದೊಂದು ಅಪಾಯಕಾರಿ ಕೆಲಸಕ್ಕೆ ಕೈಹಾಕಲೇಬಾರದು. `ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ' ಅಂತ ಬೇಡಿಕೊಂಡೇ ಹತ್ತಿರ ಸುಳಿದರೂ ಯಾವಾಗ ಅಪಾಯ ಎದುರಾಗುತ್ತೆ ಎನ್ನಲಾಗದು. ಅದಕ್ಕಾಗಿ ಲಾರಿ, ಟ್ರ್ಯಾಕ್ಟರ್ ಹಿಂದೆ ಬರೆದಿರುತ್ತದಲ್ಲಾ, `ನಡುವೆ ಸುರಕ್ಷಿತ ಅಂತರವಿರಲಿ' ಅಂತ. ಆ ತತ್ವ ಪಾಲಿಸಬೇಕು. ನಮ್ಮಂಥ ಬೈಕಿನವರು ಇಂಥ `ಇಕ್ಕಟ್ಟಿನ ರಸ್ತೆ'ಯಲ್ಲಿ  `ಭಾರೀ ವಾಹನ' ಓವರ್‌ಟೇಕ್ ಮಾಡೋದಿಕ್ಕೆ ಹೋದ್ರೆ ಏನಾದೀತು ಹೇಳು?

*ಹಾಗಾದ್ರೆ ಬಾಸ್ ಮುಂದೆ ಹೇಗಿರಬೇಕು?

ಭೀಕರ ದುರಂತದಲ್ಲಿ ನಮ್ಮ ಅತ್ಯಂತ ಆಪ್ತರೊಬ್ಬರು ಸಾವನ್ನಪ್ಪಿ, ಈಗತಾನೇ ಅವರ ಅಂತ್ಯ ಸಂಸ್ಕಾರ ಮುಗಿಸಿ ಬಂದವರ ಹಾಗಿರಬೇಕು. ಇಲ್ಲವಾದರೆ `ನಿಮಗೆ ಸೀರಿಯಸ್‌ನೆಸ್ ಇಲ್ಲವೇನ್ರೀ?' ಅಂತ ಉಗಿಸಿಕೊಳ್ಳಬೇಕಾಗುತ್ತದೆ.

* ಮಾಲೀಕರಿಗೂ ಬಾಸ್‌ಗೂ ಏನು ವ್ಯತ್ಯಾಸ?

ಹೋರಿಯೊಂದರ ಕೊಂಬು ಮತ್ತು ಬಾಲದ ಹಾಗೆ. ಕೊಂಬಿಗೆ ಎತ್ತಿ ಒಗೆದು ಸಾಯಿಸಿಬಿಡುವ ಸಾಮರ್ಥ್ಯ ಇರುತ್ತದೆ. ಆದರೆ ಹಾಗೆ ಮಾಡದು. ಆದರೆ ಬಾಲ ಇದೆಯಲ್ಲಾ, ಅದು ಆಗಾಗ ಬೀಸುತ್ತಾ ಹೊಡೀತೀನಿ ಬಡೀತೀನೀ ಅಂತ ಹೇಳ್ತಾನೇ ಇರುತ್ತೆ.

*ಬಾಸನ್ನು ಹೇಗೆ ಭಾವಿಸ್ತೀರಿ?

ಅವರ ಪರದಾಟ, ಪೀಕಲಾಟ, ಅಸಹಾಯಕತೆ, ಕೂಗಾಡುವಿಕೆ ಇವೆಲ್ಲಾ ನಮಗೆ ಮನೋರಂಜನೆಯ ವಸ್ತುಗಳು.

*ನಿಮ್ಮ ಆರೋಗ್ಯ ಮತ್ತು ಸಂತೋಷದ ಗುಟ್ಟು?

ಬೈಗುಳ. ಜನ್ಮಾರಾಭ್ಯದಿಂದ ಇಂದಿನವರೆಗೂ ಆಹಾರಕ್ಕಿಂತ ಬೈಗುಳ ಸೇವಿಸಿದ್ದೇ ಹೆಚ್ಚು. ಹೀಗಾಗಿ ಅದೇ ಟಾನಿಕ್. `ನಿಮ್ಮ ಬೈಗುಳವೆನಗೆ ಹಸಾದವಯ್ಯಾ ಕೋಪಸಂಗಮದೇವಾ' ಅಂತ ಹಾಡಿಕೊಳ್ಳುತ್ತೇನೆ.

* ಒಂದು ವೇಳೆ ನೀವೇನಾದ್ರೂ ಬಾಸ್ ಸ್ಥಾನಕ್ಕೆ ಹೋದ್ರೆ?

ದಯವಿಟ್ಟು ಬೇಡ. ಹಾಗೇನಾದರೂ ಆದ್ರೆ ಕೆಲಸ ಬಿಟ್ಟು ಹೋಗುತ್ತೇನೆ. ಪ್ರೇತವೇ ಅಧಿಕಾರದ ಮುಳ್ಳಿನ ಕುರ್ಚಿ, ಅದರಲ್ಲಿ ಕುಳಿತು ಇತರರಿಗೆ ಬೈಯೋದು. ಓರಗೆಯವರ ಓರೆನೋಟ, ....ಮಗ್ನೇ ನಿನ್ನ ನೋಡ್ಕೋತೀನಿ ಅಂತ ಅವರು ಮನಸ್ಸಿನಲ್ಲೇ ಶಾಪ ಹಾಕೋದು ಬೇಡ.

* ಜೀವನದಲ್ಲಿ ನಿಮ್ಮ ಗುರಿ?

ಸಾಯೋತನಕ ಖುಷಿಯಾಗಿದ್ದು, ಮುಖದಲ್ಲಿ ಮಾತ್ರ ಸೂತಕದ ಛಾಯೆ ಧರಿಸಿ ಕೆಲಸ ಮಾಡುವುದು.
 ಪ್ರೇತದ ಪ್ರಶ್ನೆ ಕೇಳಿ ಸುಬ್ರಾಯನಿಗೇಕೋ ಸಂಶಯ ಮೂಡಿತು. ಕೇಳಿದ. ಪ್ರೇತವೇ ನೀನು ಬದುಕಿದ್ದಾಗ ಏನಾಗಿದ್ದೆ?
ಪತ್ರಕರ್ತ. ತ್ರಿಲೋಕ ಪತ್ರಿಕೆಯ ತ್ರಿಶಂಕು ಪತ್ರಕರ್ತ. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಪತ್ರಿಕೆ. ಅದರಲ್ಲಿ ಒಂದು ಪ್ರಮುಖ ಸ್ಥಾನದಲ್ಲಿಯೇ ಇದ್ದೆ.
ಸುಬ್ರಾಯ ಬೈಕ್ ನಿಲ್ಲಿಸಿ ಒಂದುಕ್ಷಣ ಪ್ರೇತದ ಮುಖ ನೋಡಿದ. ಹೌದು ಇದು ಎಲ್ಲೋ ಕಂಡ ಮುಖ. ಮೂತಿಯೂ ಸೊಟ್ಟಗಾಗಿದೆ. ಯಾಕೆ ಈ ಸ್ಥಿತಿ ಬಂತು?

ಪ್ರೇತ ಮಾರ್ಮಿಕವಾಗಿ ಮಾತು ಆರಂಭಿಸಿತು. 

ಸರಸ್ವತಿಗೆ ದ್ರೋಹ ಬಗೆದರೆ ಆಗುವ ಪಾಡು ಇದು. ಒಳ್ಳೆಯ ಸಂಸ್ಥೆಯಲ್ಲಿ ಒಳ್ಳೆಯ ಸ್ಥಾನದಲ್ಲಿಯೇ ಇದ್ದೆ. ಆದ್ರೆ ನನ್ನ ಬುದ್ದಿ ಯಾಕೆ ಕಂತ್ರಿ ಆಯ್ತೋ ತಿಳಿಯದು. ನಮ್ಮಲ್ಲೂ ಸುಬ್ರಾಯ ಅನ್ನುವ ವರದಿಗಾರ ಇದ್ದ. ಅವನೇನು ಉಳಿದವರೂ ಒಳ್ಳೆಯ ಘಟಾನುಘಟಿಗಳೇ ಇದ್ರು.  ಆದ್ರೆ ನಾನೇ ಅವರನ್ನು ತೀರಾ ಕೆಟ್ಟದಾಗಿ ನಡೆಸಿಕೊಂಡೆ. ಕೊಡಬಾರದ ಹಿಂಸೆಕೊಟ್ಟೆ. ಒಳ್ಳೆಯ ವರದಿಗಳನ್ನು ಪ್ರಾಮಾಣಿಕರಿಂದ ಬರೆಸಿ ಅದರ ಮೂಲಕ ಕೆಲವರನ್ನು ಬ್ಲಾಕ್‌ಮೇಲ್ ಮಾಡಿದೆ. ನನ್ನ ಹುನ್ನಾರಕ್ಕೆ ಸಹೋದ್ಯೋಗಿಗಳು, ಪತ್ರಿಕೆ  ಕೆಟ್ಟ ಹೆಸರು ಪಡೆದದ್ದೂ ಆಯಿತು... ದೀರ್ಘ ಉಸಿರೆಳೆಯಿತು ಪ್ರೇತ.
ಕೆಲವು ವರದಿಗಾರರ ಚಲನವಲನಗಳನ್ನು ಸಮಾಜಘಾತುಕ ಶಕ್ತಿಗಳಿಗೆ ನೀಡಿದೆ. ಆದರೆ, ಅವರ ಅದೃಷ್ಟ ಚೆನ್ನಾಗಿತ್ತು. ಅಂದು ತಪ್ಪಿಸಿಕೊಂಡವರು ಈಗ ಒಳ್ಳೆಯ ಕಡೆಯಲ್ಲಿದ್ದಾರೆ. ಸಂಸ್ಥೆಗೂ ಒಂದು ದಿನ ಕೊನೆಗಾಲ ಬಂದೇ ಬಂತು. ಇಂದು ನಾಳೆ ಎಂದು ದಿನಗಣನೆಯಲ್ಲಿದ್ದಾಗ. ನನ್ನ ಕಾರು ಅಪಘಾತಕ್ಕೀಡಾಯಿತು. ಭೂಮಿಗೆ ನನ್ನ ಭಾರ ಕಳೆಯಿತು. ನೋಡು ಮೂಗು ಹೇಗೆ ಸೊಟ್ಟಗಾಗಿದೆ...
ಯಮಲೋಕಕ್ಕೆ ಹೋದೆ. ನನ್ನ ಪಾಪಗಳ ಖಾತೆ ಭರ್ತಿಯಾಗಿತ್ತು. ಅಕ್ಷರ ಲೋಕಕ್ಕೆ ದ್ರೋಹ ಬಗೆದ ಕಾರಣ  ಸ್ವರ್ಗ ಬಿಡಿ, ನರಕಕ್ಕೂ ಪ್ರವೇಶ ಸಿಗಲಿಲ್ಲ. ಅಲ್ಲಿಯೂ ಪ್ರತಿಭಟನೆ. ನನ್ನ ಸ್ಥಿತಿಗೆ ಯಮನೂ ಅಸಹಾಯಕನಾದ. ಕೊನೆಗೆ ಹೀಗೆ ಎಡಬಿಡಂಗಿಯಾಗಲು ಭೂಮಿಗೆ ವಾಪಸ್ ಕಳುಹಿಸಿದ. ಈಗ ಯಮಲೋಕದ ಪತ್ರಿಕೆ `ಪಾಶ'ಕ್ಕೆ ಭೂಲೋಕದಿಂದ ಅರೆಕಾಲಿಕ ವರದಿಗಾರನಾಗಿ ದುಡಿಯುತ್ತಿದ್ದೇನೆ. ಈ ಶಾಪ ಯಾವಾಗ ಮುಗಿಯುತ್ತೋ ಗೊತ್ತಿಲ್ಲ.
ಕ್ಷಣ ಕಾಲ ಮೌನದ ನಂತರ ಪ್ರೇತ ಮತ್ತೆ ಮಾತನಾಡಿತು. ಸುಬ್ರಾಯ ನೀವು ನಿಜವಾಗ್ಲೂ ಖುಷಿಯಾಗಿದ್ದೀರಾ?
ಲೈಟ್ ಆಗಿ ಕೆಮ್ಮಿದ ಸುಬ್ರಾಯ ಹೇಳಿದ. ನಿನಗಿಂತ ಸಾವಿರಪಾಲು ನೆಮ್ಮದಿಯಿಂದ ಇದ್ದೇನೆ. ನನಗೊಂದು ನೆಲೆಯಿದೆ. ಉದ್ಯೋಗದ ಕಷ್ಟ ಸುಖ ಎಲ್ಲ ಕ್ಷೇತ್ರದಲ್ಲೂ ಇದ್ದಿದ್ದೇ. ಅದಕ್ಕೆ ಹೆಚ್ಚು ಯೋಚಿಸುವುದಿಲ್ಲ. ನನ್ನೊಂದಿಗೆ ಸಿಡುಕರಿದ್ದಾರೆ ಆದರೆ ಕೆಡುಕರು ಇಲ್ಲವೇ ಇಲ್ಲ.

*ನಿಮ್ಮ ಸಂದೇಶ ಏನು? ಎಂದು ಪ್ರೇತ ಕೇಳಿತು.

ಪ್ರೇತವೇ ನಿನ್ನ ಶಾಪ ಆದಷ್ಟು ಬೇಗ ಮುಕ್ತಿಯಾಗಲಿ. ಈ ಸ್ಥಿತಿ ಯಾರಿಗೂ ಬಾರದಿರಲಿ. ಈ ಕ್ಷೇತ್ರದಲ್ಲಿ ಯಾರೂ ನಿನ್ನ ಹಾಗೆ ಮಾಡದಿರಲಿ.
-ಅಷ್ಟರಲ್ಲಿ ಬೈಕು ಸ್ಮಶಾನ ತಲುಪಿತ್ತು. ಹುಣಸೆಮರವನ್ನು ಕಂಡ ಪ್ರೇತ ಬೈಕಿನಿಂದ ಛಂಗನೆ ಜಿಗಿದು ತನ್ನ ಫ್ಲ್ಯಾಟ್ ಸೇರಿತು.

ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ

ದೇವಸ್ಥಾನ ಉಳಿಸಲು ನಡೆದ ಹೋರಾಟ ಊರು ಉಳಿಸಲು ನಡೆಯಲಿ

2010ರ ಸೆಪ್ಟೆಂಬರ್‌ 20ರಂದು ಕಾರ್ಕಳದಲ್ಲೊಂದು ಬೃಹತ್‌ ಪ್ರತಿಭಟನೆ ನಡೆಯಿತು. ಅನಧಿಕೃತ ದೇವಾಲಯಗಳನ್ನು ನೆಲಸಮಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಹಿಂದೂಪರ ಸಂಘಟನೆಗಳು ಬೀದಿಗಿಳಿದಿದ್ದವು.
ಕಡ್ತಲದ ಮಟ್ಟಿಗೆ ಅದೊಂದು ಸಕಾಲಿಕ, ಒಳ್ಳೆಯ ಹೋರಾಟವೇ. ದೇವಸ್ಥಾನ ಕಳೆದುಕೊಳ್ಳುವುದರಲ್ಲಿ ಕಡ್ತಲ ಗ್ರಾಮವೂ ಸೇರಿತ್ತು.
ಊರು, ಅದರ ಚರಿತ್ರೆ, ಆರಾಧ್ಯ ದೈವದ ಜತೆಗಿನ ಭಾವನಾತ್ಮಕ ಸಂಬಂಧದ ಅರಿವಿಲ್ಲದ, ಬುರುಡೆಯೊಳಗೆ ಕನಿಷ್ಠ ಬುದ್ದಿ ಎಂಬುದೊಂದು ಇಲ್ಲದ, ಊರಿನ ಇತಿಹಾಸ, ಪ್ರಮುಖ ಘಟನೆಗಳ ಬಗ್ಗೆ ಅರಿವಿಲ್ಲದ, ಅರಿಯಲು ಪ್ರಯತ್ನಪಡದ ಗ್ರಾಮಾಡಳಿತದ ಬುದ್ದಿರಹಿತ ಅಧಿಕಾರಿಗಳೆನಿಸಿಕೊಂಡಿರುವವರಿಂದ ಆದ ಪ್ರಮಾದವಿದು.
ಒಟ್ಟಾರೆ ಕಡ್ತಲದಲ್ಲಿ ದುರ್ಗಾಪರಮೇಶ್ವರಿ ಎಂಬ ದೇವಸ್ಥಾನ ಇದೆ. ನೀವು ನೆಲಸಮಗೊಳಿಸಬಹುದು ಎಂದು ಸರ್ಕಾರಕ್ಕೆ ಏಕಾಏಕಿ ವರದಿ ಕಳುಹಿಸಿಕೊಟ್ಟರು.
ಊರಿನ ಜನ ಎದ್ದುನಿಂತರು. ದೇವಸ್ಥಾನ ಉಳಿಸಲು ಪಣ ತೊಟ್ಟರು. ಜೀರ್ಣೋದ್ಧಾರಗೊಂಡು ಭಕ್ತರನ್ನು ಸೆಳೆಯುತ್ತಿದ್ದ ದೇವಸ್ಥಾನ ನೆಲಸಮಗೊಳಿಸುವುದರ ವಿರುದ್ಧ ಹಲವು ಸಭೆಗಳು ನಡೆದವು. ಗಣೇಶೋತ್ಸವದ ಸಾರ್ವಜನಿಕ ಸಭೆಯಲ್ಲೂ ಭಾಷಣ ಮೊಳಗಿತು. ಕೊನೆಗೆ ಕಾರ್ಕಳದಲ್ಲೊಂದು ಬೃಹತ್‌ ಪ್ರತಿಭಟನೆ ನಡೆಯಿತು. ಇದೇ ರೀತಿ ನೆಲಸಮಗೊಳ್ಳುವ ಆತಂಕವಿದ್ದ ಅನೇಕ ದೇವಸ್ಥಾನಗಳ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೊನೆಗೂ ದೇವಸ್ಥಾನದ ಮಹತ್ವ, ಅದರಿಂದ ಸಾರ್ವಜನಿಕ ಸಂಚಾರಕ್ಕೇನೂ ಅಡೆತಡೆ ಆಗದಿರುವುದು, ಅದರ ಅಧಿಕೃತತೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆಯಾಯಿತು. ವಿವಾದ ಅಲ್ಲಿಗೇ ತಣ್ಣಗಾಗಿ ಕೊನೆಗೂ ಬೊಬ್ಬರ್ಯ ದುರ್ಗಾಪರಮೇಶ್ವರಿಯ ಪೂಜೆಯ ಗಂಟೆ ನಿರಾತಂಕವಾಗಿ ಡಣ ಢಣ ಸದ್ದು ಮಾಡಿತು.

ಈಗ ಊರು ಉಳಿಸಬೇಕಿದೆ...

ಹೌದು ಸ್ವಾಮಿ. ಅಂದು ದೇವಸ್ಥಾನ ಉಳಿಸಲು ನಡೆಸಿದ ಹೋರಾಟದ ರೀತಿಯಲ್ಲೇ ಕಡ್ತಲ ಊರು ಉಳಿಸಬೇಕಿದೆ. ಪಕ್ಕನೆ ನೋಡಿದರೆ ಅರಿವಿಗೆ ಬರಲಿಕ್ಕಿಲ್ಲ. ಕಡ್ತಲದ ನೆಲ–ಜಲ ಹಂತಹಂತವಾಗಿ ನಾಶವಾಗುತ್ತಿದೆ. ಯಾರಿಗೂ ಗೊತ್ತಿಲ್ಲದೇ...

ಕೆಲವು ಮಜಲುಗಳನ್ನು ನೆನಪಿಸೋಣ

80ರ ಅಂತ್ಯ 90ರ ದಶಕದ ಆರಂಭದಲ್ಲಿ ಕಡ್ತಲದಲ್ಲಿ ಒಂದು ಗೇರುಬೀಜದ ಕಾರ್ಖಾನೆ ಆರಂಭವಾಯಿತು. ಸದ್ಯ ತಿರುಮಲ ಕ್ಯಾಶ್ಯೂ ಇಂಡಸ್ಟ್ರೀಸ್‌. ಈಗ ಕಡ್ತಲದಮಟ್ಟಿಗೆ ದೊಡ್ಡ ಉದ್ಯಮ. ಇದೇ ಉದ್ಯಮ ವಿಸ್ತರಣೆಯಾಗಿ ಮುಡಂಬು ಕುಂಜ (ಪರ್ವತ)ದ ತಪ್ಪಲಲ್ಲಿ, ರಾಜ್ಯದ ಬೇರೆ ಭಾಗಗಳಲ್ಲಿ ತನ್ನ ಘಟಕ ತೆರೆಯಿತು. ಸುಮಾರು 10 ವರ್ಷಗಳ ಕಾಲವೂ ಈ ಪರಿಸರಕ್ಕೆ ಬಂದರೆ ಗೇರು ಬೀಜದ ಸಿಪ್ಪೆಸುಟ್ಟ ಘಾಟು ಮೂಗಿಗೆ ಬಡಿಯುತ್ತಲೇ ಇತ್ತು. ಈಗ ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದೆ. ಇದರ ಹಿಂದೆಯೇ ಬಂತು ಕ್ರಷರ್‌. ಬಹುಷಃ ಜಲ್ಲಿ ಹುಡಿಮಾಡುವ ಘಟಕ ನೋಡಿದ್ದೇ ಮೊದಲು. ನಾವೆಲ್ಲಾ ಆಗ ಹೈಸ್ಕೂಲು ಹುಡುಗರು. ವಾರಕ್ಕೊಮ್ಮೆಯಾದರೂ ಆ ಘಟಕದ ಸುತ್ತ ಓಡಾಡಿ ಬೃಹತ್‌ ಯಂತ್ರಗಳನ್ನು ಮುಟ್ಟಿ ನೋಡುವುದೇ ಸಾಧನೆ!. ಅದೇ ಘಟಕದ ಹಿಂದೆ ಹತ್ತಾರು ಎಕರೆಗಳಷ್ಟು ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಕರಿಯ ಬಂಡೆ. ಈಗ ಎಷ್ಟು ಉಳಿದಿದೆಯೋ ಗೊತ್ತಿಲ್ಲ. ಬಂಡೆಯ ಬುಡದಲ್ಲೇ ಕೃಷಿಭೂಮಿ. ಕಲ್ಲು ಗಣಿಗಾರಿಕೆಯಿಂದ ಅದೂ ಉಳಿದಿರುವುದು ಸಂಶಯವೇ.
ಇದರ ಮಧ್ಯೆ ನಮ್ಮದೇ ಬಂಧುಗಳ ಮನೆಯ ಮೇಲ್ಭಾಗದ ಗುಡ್ಡದಲ್ಲಿ ಸೋಮನಾಥ ಕಲ್ಲು ಪತ್ತೆಯಾಯಿತು. ಬೃಹತ್‌ ಯಂತ್ರ, ಕಂಪ್ರೆಸರ್‌ ಬಳಸಿ ಲಘು ಸ್ಫೋಟಕ ಇಟ್ಟು ದೊಡ್ಡ ಸಾಬೂನು ಕೇಕ್‌ ರೀತಿಯಲ್ಲಿ ಬಂಡೆಗಳನ್ನು ಕತ್ತರಿಸಿ ತೆಗೆಯುತ್ತಿದ್ದರು. ಕೆಂಪನೆಯ ಬಹಳ ಅಪರೂಪದ ಕಲ್ಲು ಅದು. ಈ ‘ಘನಕಾರ್ಯ’ದಲ್ಲಿ ನಮ್ಮ ಕುಟುಂಬವೂ ಹಿಂದೆ ಬೀಳಲಿಲ್ಲ.  ಮನೆಯ ಮುಂದಿನ ಬೆಟ್ಟದಲ್ಲಿ ಮತ್ತಷ್ಟು ಸೋಮನಾಥ ಕಲ್ಲು ಪತ್ತೆಯಾಯಿತು. ಆ ಬೆಟ್ಟಕ್ಕೂ ಮಂಗಳೂರು ಮೂಲದ ಗ್ರಾನೈಟ್‌ ಉದ್ಯಮಿಯೊಬ್ಬರು ಬಂದು ಲಗ್ಗೆಇಟ್ಟರು. ಕೆಲಕಾಲ ಅದೂ ನಡೆಯಿತು. ಹಣ ಹಂಚಿತಿನ್ನಲು ಹತ್ತಾರುಮಂದಿ ಹುಟ್ಟಿಕೊಂಡರು. ರಾತೋರಾತ್ರಿ ಬೃಹತ್‌ ಕಲ್ಲಿನ ಗಟ್ಟಿಗಳ ಸಾಗಣೆ ನಡೆಯಿತು. ಅದರ ಬಳಿಕ ಪಂಚಾಯಿತಿ ಹಿಂಭಾಗ (ಕೇರಾಫ್‌ ನಾರಾಯಣ ಪೂಜಾರಿ ಅವರ ಸೇಂದಿ ಅಂಗಡಿ ಬಳಿ) ಇದ್ದ ಗುಂಡುಕಲ್ಲುಗಳ ಮೇಲೂ ಕಲ್ಲು ತೆಗೆಯುವವರ ಕಣ್ಣು ಬಿತ್ತಾದರೂ ಕಾನೂನು ತೊಡಕಿನಿಂದ ಅದು ಸಾಧ್ಯವಾಗಲಿಲ್ಲ. ಇವೆಲ್ಲಕ್ಕೆ ಪರವಾನಿಗೆ ಇತ್ತೋ ಇಲ್ಲವೋ ದೇವರೇ ಬಲ್ಲ. ನಮ್ಮಂಥ ಸಣ್ಣ ಹುಡುಗರಿಗೆ ಅವೆಲ್ಲ ಅರ್ಥವಾಗುವಂಥದ್ದೂ ಆಗಿರಲಿಲ್ಲ. ಆದರೆ, ಸುಂದರ ಬೆಟ್ಟಗಳು ಆಕಾರ ಕಳೆದುಕೊಂಡವು. ಅರ್ಧಂಬರ್ಧ ಓದಿ ಊರಿನಲ್ಲೇ ಉಳಿದುಕೊಂಡವರು ‘ಟಿಂಬರು ಮರ್ಚಂಟು’ಗಳಾದರು, ಕಾಲೇಜಿನಿಂದ ವಾಶ್‌ಔಟ್‌ ಅನಿಸಿಕೊಂಡ ಧಡೂತಿಗಳು ಕಲ್ಲು ಉದ್ಯಮಿಗಳಾದರು. ಇನ್ನೂ ಉಳಿದದ್ದು ಭೂಮಿ. ಇದೇ ಸಂತಾನಕ್ಕೆ ಸೇರಿದ ಹಲವರು ‘ರಿಯಲ್‌ ಎಸ್ಟೇಟ್‌’ ಹೆಸರಿನಲ್ಲಿ ದಂಧೆ ಆರಂಭಿಸಿದರು.
ಹೀಗೆ ಕಡ್ತಲದ ಹಸಿರು ನಾಶವಾಗುತ್ತಲೇ ಇದೆ. ಜಲ ಬತ್ತುತ್ತಿದೆ. ಬಂಡೆ ಗುಡ್ಡಗಳು ಬೋಳಾಗುತ್ತಿವೆ.

ಐತಿಹಾಸಿಕ ಪಾಂಡವರ ಅಗಳು ನಾಶ

ಒಂದು ಐಡಿಯಾ ನಮ್ಮೂರಿನ ಯಾವನೋ ಮೇಧಾವಿಗೆ ಹೊಳೆಯಿತು. ಶಾಲೆಯ ಹಿಂಭಾಗ ಕೋಟೆಯ ರೀತಿ ಇದ್ದ ‘ಪಾಂಡವರ ಅಗಳು’ಹೆಸರಿನ ಉದ್ದವಾದ ಗುಡ್ಡ ಸ್ವರೂಪದ ಗೋಡೆ ಇತ್ತು. ಶಾಲೆಗೂ ಪಕ್ಕದಲ್ಲೇ ಇದ್ದ ಹಾಡಿಗೂ ಗಡಿಯ ರೂಪದಲ್ಲಿತ್ತು ಅದು. ಪಾಂಡವರು ಅಲ್ಲಿಗೆ ಬಂದಿದ್ದರು ಎಂಬ ಪ್ರತೀತಿಯೂ ಇದೆ. ಅದಕ್ಕಿಂತಲೂ ಅದರಲ್ಲಿದ್ದ ಜೀವವೈವಿಧ್ಯ ಯಾರಿಗೂ ಕಾಣಿಸಲಿಲ್ಲ. ಪರಿಸರ ಪಾಠ ಹೇಳಲು ಸೂಕ್ತವಾದ ತಾಣ ಎಂದೂ ಗೊತ್ತಾಗಲಿಲ್ಲ. ಶಾಲಾ ಮೈದಾನ ವಿಸ್ತರಣೆ ಹೆಸರಿನಲ್ಲಿ ಅಗಳಿಗೆ ಜೆಸಿಬಿ ಹಾಕಲಾಯಿತು. ಮೈದಾನವೇನೋ ದೊಡ್ಡದಾಯಿತು. ಆದರೆ, ಪರಿಸರದ ಮೇಲಾದ ಪರಿಣಾಮವನ್ನು ಯಾರೂ ಊಹಿಸಲಿಲ್ಲ.

ಪರಿಣಾಮ ಹೀಗಿದೆ...

ಸುಮಾರು ಎರಡು ಕಿಲೋಮೀಟರ್‌ ಉದ್ದದ ಪಾಂಡವರ ಅಗಳಿನಲ್ಲಿ ಸುಮಾರು ನಾಲ್ಕು ಅಡಿ ಆಳದ ಕಂದಕ ಇತ್ತು. ಮಳೆ ಬಂದರೆ ಶಾಲಾ ಮೈದಾನ ಆಸುಪಾಸಿನ ನೀರೆಲ್ಲಾ ಸಂಗ್ರಹವಾಗಿ ಜಡ್ಡುಗದ್ದೆ ತಿರುವಿನ ಬಳಿಯ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿ ಇಂಗುತ್ತಿತ್ತು. ಹಾಗೆ ಇಂಗಿ ಉಳಿದ ನೀರು ತೋಡುಗಳ ಮೂಲಕ ವ್ಯವಸ್ಥಿತವಾಗಿ ಗದ್ದೆಗಳಿಗೆ ಹರಿದುಹೋಗುತ್ತಿತ್ತು. ಅತ್ತ ರೈತರು ಅಗತ್ಯಕ್ಕೆ ತಕ್ಕಂತೆ ನೀರು ಬಿಡಿಸಿಕೊಳ್ಳುತ್ತಿದ್ದರು. ಊರಿನ ಬಾವಿಗಳಲ್ಲಿ ಯಥೇಚ್ಛ ಅಂತರ್ಜಲ ಇತ್ತು. ಊರಿನ ಮುಖ್ಯ ಭಾಗದಲ್ಲಿ ನೀರು ಕಡಿಮೆಯಾದರೂ ಊರಿಡೀ ಪೂರೈಸುವಷ್ಟು ನೀರು ಕಂಟೆಬೆಟ್ಟು, ಜಡ್ಡುಗದ್ದೆಯ ಬಾವಿಗಳಲ್ಲಿ ಇರುತ್ತಿತ್ತು. ಇತ್ತೀಚೆಗೆ ತೋಡಲಾದ ಬೋರ್‌ವೆಲ್‌ಗೂ ಸಾಕಷ್ಟು ಮರುಪೂರಣಗೊಳ್ಳುತ್ತಿತ್ತು. ಆದರೆ ಇದ್ಯಾವುದೂ ಕಡ್ತಲದ ಊರು ಉದ್ಧಾರ ಮಾಡುವವರಿಗೆ ತಿಳಿಯಲಿಲ್ಲ. ಪರಿಸರ ಭಾಷಣಗಳು ಶಾಲಾ ಕೊಠಡಿಗಷ್ಟೇ ಸೀಮಿತವಾಯಿತು. ಒಂದು ವೇಳೆ ಪಾಂಡವರ ಅಗಳನ್ನು ಹಾಗೆಯೇ ಬಿಟ್ಟು ಸೋಪಾನದ ರೀತಿ ಕತ್ತರಿಸಿ ಕಂದಕ್ಕೆ ಕಲ್ಲು ಚಪ್ಪಡಿ ಅಥವಾ ಸಿಮೆಂಟ್‌ ಹಲಗೆಯ ಮುಚ್ಚಿಗೆ ಮಾಡಿಬಿಡುತ್ತಿದ್ದರೆ ಕಡ್ತಲ ಶಾಲೆಗೆ ಕಾಂಪೌಂಡ್‌ ಕಮ್‌ ಸುಂದರ ಸ್ಟೇಡಿಯಂ ನೈಸರ್ಗಿಕವಾಗಿಯೇ ನಿರ್ಮಾಣಗೊಳ್ಳುತ್ತಿತ್ತು. ಜೀವ ವೈವಿಧ್ಯ, ನೀರು ಉಳಿಯುತ್ತಿತ್ತು. ಗಿಡಮರಗಳ ನೆರಳಿನಲ್ಲಿ ಹಾಯಾಗಿ ಮಕ್ಕಳು ಪಾಠ ಓದುತ್ತಿದ್ದರು. ಆಟ ನೋಡಬಹುದಿತ್ತು.
ಪಾಂಡವರ ಅಗಳು ನೆಲಸಮವಾಗಿ ಮೈದಾನ ವಿಸ್ತರಣೆಯಾದ ಸ್ಥಳ ಹೀಗಿದೆ
ಪಾಂಡವರ ಅಗಳಿನ ಕಥೆ ಅಲ್ಲಿಗೇ ನಿಲ್ಲುವುದಿಲ್ಲ. ಮೈದಾನದಲ್ಲಿ ಹರಿದ ನೀರು ಕಂಟೆಬೆಟ್ಟಿನ ಭೂಮಿಯಲ್ಲಿ ಒಟ್ಟಾರೆ ಹರಿದು ಎಲ್ಲಿಯೋ ಸೇರಿ ಅಕ್ಷರಶಃ ಪೋಲಾಗುತ್ತಿದೆ. ಜತೆಗೆ ಮೈದಾನದ ಮಣ್ಣು ಕೊಚ್ಚಿಹೋಗುತ್ತಿದೆ. ವಿಶಾಲವಾದ ಜಾಗದಲ್ಲಿ ಶಾಲೆಗೆ ಸುಂದರ ಮೈದಾನ ನಿರ್ಮಾಣ ಆಯಿತು ಎಂದು ನಾವೂ ಒಂದು ಹಂತಕ್ಕೆ ಖುಷಿಪಟ್ಟೆವು. ಆದರೆ, ಆ ಗುಡ್ಡವನ್ನೇ ಊರಿನ ಶಾನಭೋಗರೂ (ಬುರುಡೆಯೊಳಗೆ ಕನಿಷ್ಠ ಬುದ್ದಿ ಎಂಬುದೊಂದು ಇಲ್ಲದ, ಕಾಸಿಗಾಗಿಯೇ ಹುಟ್ಟಿದ), ಅವರ ಜತೆಗಿನ ಉಗ್ರಾಣಿಯೂ ಒಟ್ಟಾಗಿ ಯಾರ್ಯಾರದೋ ಹೆಸರಿಗೆ ಬರೆದುಕೊಟ್ಟರು. ಅಂಥವರ ಪಾಲಿಗೆ ‘ಸುಭೇದಾರಿಕೆಯೂ’ ಸಿಕ್ಕಿತು.  ಮೈದಾನ ವಿಸ್ತರಣೆಗೆ ಮುಂದಾಗಿ ಜೆಸಿಬಿ ತಂದವರು ದುಡ್ಡು ಮಾಡಿದರು. ಅದಕ್ಕೂ ಮುನ್ನ ಶಾಲಾ ಆವರಣದಲ್ಲಿ ಗಿಡನೆಡಲು ಗುತ್ತಿಗೆ ವಹಿಸಿಕೊಂಡವರಿದ್ದಾರೆ!. ಅವರ ಅಮೃತ ಹಸ್ತದಿಂದ ನೆಟ್ಟ ಗಿಡಗಳು ಸ್ವರ್ಗವಾಸಿಯಾಗಿವೆ. ಆ ಶಾಲೆಯಲ್ಲಿ ಓದಿದವರೇ ಶಾಲೆಯ ಜಾಗ ತನ್ನದು ಎಂದು ವಾದಿಸಿ ವಿಶಾಲವಾದ ಮೈದಾನದ ಒಂದು ಭಾಗದಲ್ಲಿ ವಕ್ಕರಿಸಿಬಿಟ್ಟರು. ಅದನ್ನು ತೆರವು ಮಾಡಬೇಕೆಂಬ ಪ್ರಜ್ಞೆ ಶಾಲಾ ಆಡಳಿತದಲ್ಲಾಗಲೀ ಊರ ಉದ್ದಾರವನ್ನು ಗುತ್ತಿಗೆ ಪಡೆದವರಿಗಾಗಲೀ ಮೂಡಲೇ ಇಲ್ಲ. ಕಂಟೆಬೆಟ್ಟು ನಿವಾಸಿಗಳು ತಮ್ಮ ಪ್ರದೇಶಕ್ಕೆ ಹೋಗಬೇಕಾದ ದಾರಿಗಾಗಿ ಹೋರಾಟ ನಡೆಸಬೇಕಾಯಿತು. ಗುಡ್ಡ ಅಗೆಯುವ ಮುನ್ನವೇ ಆಕ್ಷೇಪಿಸಬೇಕಿತ್ತು ಎಂದು ಈಗ ಅನಿಸುತ್ತದೆ. ಈಗ ಅಲ್ಲಿ ವಕ್ಕರಿಸಿದವರು ತಮ್ಮದಲ್ಲದ ಜಾಗಕ್ಕೆ ವಿನಾಕಾರಣ ಹೋರಾಡುತ್ತಿದ್ದಾರೆ. ಈ ಸತ್ಯ ಗೊತ್ತಿದ್ದೂ ರಾಜಕೀಯದ ಜಿದ್ದಿಗೆ ಅವರಿಬ್ಬರನ್ನೂ ಬಲಿಕೊಟ್ಟು ದೂರದಲ್ಲಿ ಹಲವು ಮಂದಿ ನಗುತ್ತಿದ್ದಾರೆ. ಇದರ ಪರಿಣಾಮ ನಮ್ಮ ಕುಟುಂಬದ ಮೇಲಾಗಿದೆ. ಪರ್ವಾಗಿಲ್ಲ, ನಮ್ಮ ಕೇರಿಗೆ ಹೋಗಲು ದಾರಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಮುಂದೆ ಪ್ರಕರಣ ನ್ಯಾಯಾಲಯದಲ್ಲಿದೆ (ಈ ಪ್ರಕರಣ ಮತ್ತು ಊರಿನ ರಾಜಕೀಯದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ). ಈಗ ಇದೇ ದಾರಿಯ ಲಾಭ ಪಡೆದು ನಮ್ಮ ಮನೆಯ ಸಮೀಪವೇ ಸಿಮೆಂಟ್‌ ಇಟ್ಟಿಗೆ ತಯಾರಿಕಾ ಘಟಕ ತಲೆಯೆತ್ತಿದೆ. ಅದರ ಆಸುಪಾಸಿನಲ್ಲಿದ್ದ ಹಾಡಿ ಸಂಪೂರ್ಣ ಬೋಳಾಗಿ ರಸ್ತೆ ಕಾಣುತ್ತಿದೆ. ಹಾಡಿ, ಕಾಡುಗಳು ನಾಗಸ್ಥಾನ, ಭೂತಸ್ಥಾನಕ್ಕಷ್ಟೇ ಸೀಮಿತವಾಗಿವೆ. ಮುಡಂಬು ಕುಂಜ, ಊರ ಮುಂಭಾಗ ನೀರಿನ ಟ್ಯಾಂಕ್‌ ಪ್ರದೇಶದ ಗುಡ್ಡ ಯಾವುದನ್ನೂ ಬಿಟ್ಟಿಲ್ಲ. ಎಲ್ಲವೂ ನಿವೇಶನ, ಆಶ್ರಯಮನೆಗಳಿಗೆ ಮೀಸಲಾಗಿಬಿಟ್ಟಿದೆ. ಕಡ್ತಲದ ಹಸಿರು ಇತಿಹಾಸದ ಪುಟ ಸೇರುತ್ತಿದೆ.
ಕ್ರಷರ್‌ ಸಮೀಪದ ಬಂಡೆಯಿಂದ ಸಿಡಿದ ಕಲ್ಲುಗಳು ಎಷ್ಟೋಬಾರಿ ಬೊಬ್ಬರ್ಯನನ್ನೂ ನಡುಗಿಸಿವೆ. ಆಸುಪಾಸಿನ ಮಂದಿಯ ಮೌನವೇದನೆ, ಕೃಷಿ ಭೂಮಿ ಸೇರಿದ ಕಲ್ಲುಪುಡಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.

ಬರಿದಾದ ತೀರ್ಥೊಟ್ಟಿ

2006ರಲ್ಲಿ ನ
ತೀರ್ಥೊಟ್ಟಿ ಬರಿದಾಗಿರುವ ಬಗ್ಗೆ ಮೇ 15, 2006ರಲ್ಲಿ ಪ್ರಕಟವಾದ ಪತ್ರಿಕಾ ವರದಿ
ಮ್ಮೂರ ಗಡಿ ಭಾಗದ ತೀರ್ಥೊಟ್ಟಿ ನದಿ ಸಂಪೂರ್ಣ ಬರಿದಾಗಿತ್ತು. ಅದಕ್ಕೂ ಮುನ್ನ ಮೀನುಬೇಟೆಗಾರರು ವಿಷವಿಕ್ಕಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿದ್ದನ್ನು ಕಣ್ಣಾರೆ ನೋಡಿದ್ದೇನೆ. ನಮ್ಮ ಹೈಸ್ಕೂಲು– ಕಾಲೇಜು ದಿನಗಳಲ್ಲಿ ಜನವರಿ ಅಂತ್ಯದವರೆಗಾದರೂ ಬಹುತೇಕ ತುಂಬಿ ಹರಿಯುತ್ತಿದ್ದ ತೀರ್ಥೊಟ್ಟಿ ನದಿ ಈಗ ಅವಧಿಗೂ ಮುನ್ನವೇ ಬರಿದಾಗುತ್ತಿದೆ. ಇದಕ್ಕೆ ಹಲವರು ಪಂಪ್‌ಸೆಟ್‌ ಇಟ್ಟು ನೀರು ತೆಗೆದದ್ದೇ ಕಾರಣ ಎಂದು ವಾದಿಸಿದವರಿದ್ದಾರೆ. ಆದರೆ, ಪಂಪ್‌ಸೆಟ್‌ಗಳು ಅಂದೂ ಇದ್ದವು. ಇಂದೂ ಇವೆ. ಆದರೆ, ವ್ಯಾಪಕವಾದ ಮರಳುಗಾರಿಕೆ. ಪಕ್ಕದ ಊರಿನಲ್ಲಿರುವ ಬೃಹತ್‌ ಅಕ್ಕಿಗಿರಣಿ ಸಾಕಷ್ಟು ನೀರು ಹೀರಿ ತ್ಯಾಜ್ಯವನ್ನು ಹೊಳೆಗೆ ಬಿಡುತ್ತಿತ್ತು. ಸುಮಾರು ಅರ್ಧಭಾಗದಷ್ಟು ನೀರು ಕಂದು ಬಣ್ಣದಿಂದ ಕೂಡಿ ಹರಿಯುತ್ತಿತ್ತು. ನೀರು ಹಿಡಿದಿಡುತ್ತಿದ್ದ ಮರಳು ಇಲ್ಲವಾಗಿದೆ. ತೀರ್ಥೊಟ್ಟಿಯ ಹರಿವು ಪ್ರತಿವರ್ಷವೂ ಇಳಿಮುಖವಾಗುತ್ತಿದೆ.
ಗದ್ದೆಗಳಲ್ಲಿ ಓ ಬೇಲೆ ಧ್ವನಿ ಉಡುಗುತ್ತಿದೆ.

ಮುಂದೆ...

ಮುಂದೊಂದು ದಿನ ನಿಡ್ಡೋಡಿಯ ವಿದ್ಯುತ್‌ ಸ್ಥಾವರವೋ ರಾಸಾಯನಿಕ ಘಟಕವೋ ಕಡ್ತಲದಲ್ಲಿ ಸ್ಥಾಪನೆಯಾದರೆ ಖಂಡಿತ ಪಂಚಾಯಿತಿ, ಊರ ಗಣ್ಯರು, ಗುತ್ತಿನವರು, ಗುರಿಕಾರರು ಅನಿಸಿಕೊಂಡವರೇ ಮುಕ್ತವಾಗಿ ಊರನ್ನು ಮಾರುವುದು ಖಚಿತ. ಯಾಕೆಂದರೆ ನಿಡ್ಡೋಡಿ, ಉಡುಪಿಯಲ್ಲಾದಂತಹ ಹೋರಾಟಗಳು ನಮ್ಮೂರಿನಲ್ಲಿ ಆಗಲು ಅಸಾಧ್ಯ. ನನಗೆಷ್ಟು ಲಾಭ, ಅವನ ಕಾಲೆಳೆಯುವುದು ಹೇಗೆ ಎಂಬುದನ್ನೇ ನಾನು ಚಿಂತಿಸಬೇಕಾದರೆ. ಊರಿನ ಸಮಷ್ಟಿ ಹಿತದೃಷ್ಟಿ ನನಗೆ ಬೇಕೇ? ಇದು ನಮ್ಮ ಮನಸ್ಸು.
–ಇದ್ಯಾವುದೂ ಊರ ಗಣೇಶೋತ್ಸವದಲ್ಲಿ  ‘ನಮ್ಮ ಊರು ಹಾಗಿತ್ತು, ಹೀಗಿತ್ತು’ ಎಂದು ಹಳೇ ಕ್ಯಾಸೆಟ್‌ ನುಡಿಸಿ ಜನರನ್ನು ಮಂಗ ಮಾಡುವ ಪ್ರೊಫೆಸರ್‌ ರಾಜಕಾರಣಿಗಳಿಗಾಗಲಿ, ಹಾಲಿ ಯುವಜನರಿಗಾಗಲಿ, ಪಂಚಾಯಿತಿಯಲ್ಲಿ ಪ್ರಾಮಾಣಿಕತೆ ಶಬ್ದದ ಅರ್ಥ ತಿಳಿಯದವರಿಗೆ, ಹೋಗಲಿ ಊರ ಮಂದಿಯನ್ನು ಸೇರಿಸುವ ಬೊಬ್ಬರ್ಯನ ತಾಣದ ಆಡಳಿತಕ್ಕಾಗಲಿ ಅರಿವಿಗೆ ಬರುತ್ತಿಲ್ಲ.
ಸ್ವಾಮಿ ಬೊಬ್ಬರ್ಯ...,
ಕಡ್ತಲ ಉಳಿದರೆ ನೀನುಂಟು. ನಿನ್ನ ಧರ್ಮ ಉಂಟು, ನಿನ್ನನ್ನು ನಂಬಿದವರಾದ ನಮಗೂ ಉಳಿವುಂಟು. ಮೊದಲು ಊರು ಉಳಿಸು. ಆ ಪ್ರಾಮಾಣಿಕ ಬುದ್ಧಿ ನಮಗೆ ಕೊಡು.

ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ

Monday, 14 October 2013

ಶೇಖರ ಮಾಷ್ಟ್ರು ಎಂಬ ರಂಗನಾಯಕ

ಸುಮಾ... ಪುಚ್ಚೆ ಕಣ್ಣ್ ಮುಚ್ಚ್‌ದ್ ಪೇರ್‌ ಪಂರ್ಡ ಏರೆಗಲ್‌ ಗೊತ್ತಾಪುಜಿ ಪಂಡ್‌ದ್‌ ಎಣ್ಣಿಯನಾ...? (ಡಸ್‌್್ಸ್‌ಸ್‌... ಎಂಬ ಹಿನ್ನೆಲೆ ಸಂಗೀತ) ಒಬ್ಬ ಜಾಕೆಟ್‌ ಧರಿಸಿದ ದಪ್ಪ ದೇಹದ ಗಡ್ಡಧಾರಿ ರಂಗದ ಮೇಲೆ ಏರು ಧ್ವನಿಯಲ್ಲಿ ಈ ಸಂಭಾಷಣೆ ನುಡಿಯುತ್ತಾನೆ. ಕೆಂಪು ಬೆಳಕು ಅವನ ಮೇಲೆ ಬೀಳುತ್ತದೆ... ಇಡೀ ರಂಗದಲ್ಲಿ ಗಂಭೀರ ವಾತಾವರಣ. ಹಿನ್ನೆಲೆಯಲ್ಲಿ ಭಯ ಹುಟ್ಟಿಸುವ ಸಂಗೀತ. ... ಹಾ ಪನ್ಲ ಸುಮಾ ( ಪ್ರತಿಧ್ವನಿ, ಮತ್ತೆ ಡಸ್‌್್ಸ... ಸಂಗೀತ) ...
–ಅಲೆ ಉಂದು ಶೇಖರೆ...(ಅದೋ ನೋಡಿ ಇದು ಶೇಖರ) ಎಂದು ನಾಟಕ ನೋಡುತ್ತಿದ್ದ ಪಡ್ಡೆಮಂದಿ ಪಾತ್ರಧಾರಿಯನ್ನು ಗುರುತಿಸಿ ಕಿಸಕ್ಕನೆ ಕಿಸಿಯುತ್ತಾರೆ. ಇವತ್ತು ಶೇಖರ ಮಾಷ್ಟ್ರ ಪರಿಚಯ ನಿಮಗಾಗಿ. ಸದ್ಯ ಕಡ್ತಲದ ಎಲ್ಲ ಕಥೆಗಳಿಗೂ ಬೇಕಾಗುವ, ಸದಾ ಚಾಲ್ತಿಯಲ್ಲಿರುವ ಬಹುಮುಖ ಪ್ರತಿಭೆಯ ಮನುಷ್ಯ. ಶೇಖರ ನಾಯ್ಕ್‌ ಆಲಿಯಾಸ್‌ ಪೀಟಿ ಮಾಷ್ಟ್ರು, ಉರೂಫ್‌ ಶೇಖರ ಮಾಷ್ಟ್ರು, ಹೋಗ್ಲಿ ಹಲವರ ಬಾಯಲ್ಲಿ ಶೇಖರೆ... ಹೀಗೆ ಹಲವು ನಾಮ ಉಪನಾಮ, ಅಡ್ಡನಾಮಗಳಿಂದ ಹೊಗಳಿಗೆ, ಟೀಕೆ ಎರಡಕ್ಕೂ ಆಹಾರವಾಗಿರುವವರು ಮಾಷ್ಟ್ರು. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡೇ ಹೋಗುತ್ತಾರೆ. ಕಡ್ತಲದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ದೈಹಿಕ ಶಿಕ್ಷಕರಾಗಿದ್ದವರು ಕೆಲಕಾಲ ಅಲ್ಲಿಂದ ಮುಳ್ಕಾಡು ಶಾಲೆಯಲ್ಲಿ ಕೆಲಸ ಮಾಡಿದ್ದು... ಇದ್ಯಾವುದೂ ವರ್ಕ್‌ಔಟ್ ಆಗೋದಿಲ್ಲ ಎಂದು ಅರಿತ ಮಾಷ್ಟ್ರು ಸರ್ಕಾರಿ ನೌಕರಿಗೆ ಕಾಯದೇ ಮಂಗಳೂರಿನ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಈ ಮಧ್ಯೆ ಮಾಷ್ಟ್ರ ಗರಡಿಯಲ್ಲಿ ಪಳಗಿದ ಹುಡುಗರು ಎಷ್ಟೋ ಮಂದಿ. ಕಡ್ತಲದ ಹುಡುಗರಿಗೊಂದು ಸಾಂಸ್ಕೃತಿಕ ಚೌಕಟ್ಟು ಹಾಕಿ ಹೀಗೆ ಇರಬೇಕಪ್ಪಾ ಎಂದು ಸದಾ ಹೇಳುತ್ತಿದ್ದವರು. ಇಂದು ನನ್ನ ಬದುಕಿನಲ್ಲಿಯೂ ಶೇಖರ ಮಾಷ್ಟ್ರ ಕೊಡುಗೆಯ ಸ್ವಲ್ಪ ಪಾಲೂ ಇದೆ ಎಂದು ಕೃತಜ್ಞತೆಯಿಂದಲೇ ಹೇಳುತ್ತೇನೆ. ಊರಿನ ಹುಡುಗರು ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಬೇಕು. ಹೌದು ಅವರನ್ನೆಲ್ಲಾ ಒಂದೆಡೆ ಕಟ್ಟಿಹಾಕಿ, ಕುಣಿಸುವುದೆಂದರೆ ಸುಲಭದ ಮಾತಾ? ಆದರೆ, ತಕ್ಕಮಟ್ಟಿಗೆ ಶೇಖರ ಮಾಷ್ಟ್ರು ಯಶಸ್ವಿಯಾಗಿದ್ದಾರೆ. ಊರಿನಲ್ಲಿ ನಡೆಸಿದ ಯೋಗ ಶಿಬಿರಗಳು, ಕಟ್ಟಿದ ನಾಟಕ ತಂಡಗಳು, ಆಡಿದ ನಾಟಕಗಳು. ಅದಕ್ಕೆ ಬರುತ್ತಿದ್ದ ಊರ ಮಂದಿಯ ವಿಮರ್ಶೆಗಳು ಹೀಗೆ ಒಂದಾ ಎರಡಾ.. ನಾನೂ ಶೇಖರ ಮಾಷ್ಟ್ರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಖುಷಿಪಟ್ಟಿದ್ದೇನೆ. ನಮ್ಮ ನಡುವೆ ತಾತ್ವಿಕ ತಿಕ್ಕಾಟಗಳೂ ನಡೆದಿವೆ. ನನ್ನ ವಿಪರೀತ ತುಂಟತನವನ್ನು ಮಾಷ್ಟ್ರು ಸಹಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ನಮ್ಮದೊಂದು ಒಳ್ಳೆಯ ತಂಡ ಅಂದು ಇತ್ತು. ಇಂದು ಮಾಷ್ಟ್ರು ರಾಜ್ಯ– ಅಂತರರಾಜ್ಯಮಟ್ಟಕ್ಕೆ ಬೆಳೆದಿದ್ದಾರೆ. ಆದರೆ, ಊರಿನ ಮೋಹ ಬಿಟ್ಟಿಲ್ಲ. ತೀವ್ರ ಟೀಕೆ ಎದುರಿಸಿದಾಗ ಬೇಜಾರು ಮಾಡಿಕೊಂಡು ಮಂಗಳೂರಿಗೆ ಹೋಗಿದ್ದಾರೆ. ಮನಸ್ಸು ತಿಳಿಯಾದಾಗ ಮತ್ತೆ ಬಂದು ಇನ್ನೊಂದು ಹೊಸ ನಾಟಕವನ್ನು ವೇದಿಕೆಗೆ ತಂದಿದ್ದಾರೆ. ನಾನು ಮಾಷ್ಟ್ರನ್ನು ಅತ್ಯಂತ ಖುಷಿಯಿಂದ ಗುರುತಿಸುವುದು ಅವರ ರಂಗ ಸೇವೆ ಹಾಗೂ ಅದರ ಮೇಲಿರುವ ಪ್ರೀತಿಗೆ. ಯಾರು ಏನೇ ಅಂದರೂ ತಕ್ಷಣಕ್ಕೆ ಎದುರಾಡದ ಸ್ವಭಾವ ಮಾಷ್ಟ್ರದ್ದು. ಇಷ್ಟೆಲ್ಲಾ ಆದರೂ ಟೀಕಿಸುವವರು ಒಂದಂಶ ನೋಡಬೇಕು. ಊರಿನ ಗಣೇಶೋತ್ಸವ, ಶಾಲೆಯ ವಾರ್ಷಿಕೋತ್ಸವ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಾಳುತ್ವ ವಹಿಸಿಕೊಳ್ಳುವವರೇ ಇಂದು ನಮ್ಮೂರಿನಲ್ಲಿ ಇಲ್ಲವಾಗಿದ್ದಾರೆ. ಊರಿನ ಶಾಲಾ ವಾರ್ಷಿಕೋತ್ಸವದಲ್ಲಿ ಪಕ್ಕದೂರಿನವರನ್ನು ಕರೆಸಿ ಕಾರ್ಯಕ್ರಮ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಟೀಕಿಸುವವರಿಗೆ ಮುಂದೆ ಹೋಗಿ ಒಂದು ಕುರ್ಚಿ ಎತ್ತಿಡಲೂ ಪ್ರತಿಷ್ಠೆ ಅಡ್ಡಬರುತ್ತದೆ. ಇನ್ನೂ ಹಲವರು ಗುಂಪುಗಾರಿಕೆ ನಿರತರು. ಇಂಥ ಸಂದರ್ಭವನ್ನು ನಿಭಾಯಿಸಬಹುದಾದ ನಾಯಕತ್ವ ಮಾಷ್ಟ್ರಲ್ಲಿ ಇದೆ. 90ರ ದಶಕದಲ್ಲಿ ನಮ್ಮೂರಿನಲ್ಲಿ ರಮಾನಂದ ಹೆಗ್ಡೆ ಅವರು ಒಂದಿಷ್ಟು ರಂಗ ಸಂಘಟನೆ ನಡೆಸಿದ್ದರು. ಅವರ ನಿಧನದ ಬಳಿಕ ಅಕ್ಷರಶಃ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳು ಸತ್ತೇಹೋಗಿದ್ದವು. ಚೇತನ ಯುವಕ ಮಂಡಲ ಸಂಪೂರ್ಣ ಚೇತನ ಕಳೆದುಕೊಂಡಿತು. ಅದರ ಸದಸ್ಯರೆಲ್ಲಾ ಬೇರೆ ವಹಿವಾಟಿಗೆ ಮುಂದುವರಿದರು. ಇಂಥ ಪರಿಸ್ಥಿತಿಯಲ್ಲಿ ಬರಿಗೈಯಲ್ಲಿ ಬಂದು ಎಲ್ಲರನ್ನೂ ಸಂಘಟಿಸಿ ಊರಿನ ವೇದಿಕೆಯಲ್ಲಿ ರಂಗದ ಬೆಳಕು ಹಚ್ಚಿದರು. ನಿರ್ದಿಷ್ಟ ಸಂಘಟನೆಯ ಬ್ಯಾನರ್‌ ಅಡಿ ಗುರುತಿಸಿಕೊಳ್ಳಲಿಲ್ಲ. ಆಯಾ ಕಾಲ, ಸಂದರ್ಭ, ಕಾರ್ಯಕ್ರಮಕ್ಕೆ ಅನುಗುಣವಾಗಿ ತಕ್ಷಣಕ್ಕೊಂದು ಸಂಘಟನೆ ಕಟ್ಟಿದರು. ಹುಡುಗ–ಹುಡುಗಿಯರನ್ನು ವೇದಿಕೆ ಹತ್ತಿಸಿದರು, ಹಾಡಿಸಿ ಕುಣಿಸಿದರು. ಆದರೆ, ಶೇಖರ ಮಾಷ್ಟ್ರೂ ಯಾಕೋ ಬೇಜಾರಾಗಿದ್ದಾರೆ ಅನ್ನುವುದು ಗೊತ್ತಾಗಿದೆ. ‘ಸಾಕು ಮಾರಾಯ ಇವರನ್ನೆಲ್ಲಾ ಒಟ್ಟು ಮಾಡುವುದು ಯಾರು. ಇರಲಿ ನಮ್ಮ ಕೆಲಸ ಎಷ್ಟು ಇದೆಯೋ ಮಾಡೋಣ...’ ಎಂದು ಹೇಳಿ ಮೌನವಾಗಿದ್ದಾರೆ. ಮಾಷ್ಟ್ರು ಹಲವಾರು ಮಂದಿಗೆ ಸನ್ಮಾನ ಮಾಡಿಸಿದ್ದಾರೆ. ಗುರುತಿಸಿದ್ದಾರೆ. ಒಂದಿಷ್ಟು ವಿಶಿಷ್ಟ ( ಒಮ್ಮೊಮ್ಮೆ ವಿಚಿತ್ರ) ಎನಿಸುವ ಕಾರ್ಯಕ್ರಮಗಳನ್ನು ಕಡ್ತಲಕ್ಕೆ ಪರಿಚಯಿಸಿದ್ದಾರೆ. ಅವರಿಗೆ ಹಾರ ತುರಾಯಿಗಳೇನೂ ಬೇಡ. ಮಾಡಿದ್ದಕ್ಕೊಂದಿಷ್ಟು ಒಳ್ಳೆಯ ಮಾತನಾಡೋಣ. ಅದೇ ಅವರಿಗೆ ನೀಡುವ ಕೃತಜ್ಞತೆಯ ಪ್ರಶಸ್ತಿ.

 ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ

ಕಡ್ತಲದ ಗಣೇಶೋತ್ಸವವೂ ತಣ್ಣಗಾದ ಹುಡುಗರೂ..

ಮೊನ್ನೆ ಕಡ್ತಲದ ಗಣೇಶೋತ್ಸವ ನಡೆಯಿತು. ಹಾ ಎಲ್ಲ ಊರಿನಲ್ಲಿಯೂ ನಡೆಯಿತು. ಅದರಲ್ಲೇನು ವಿಶೇಷ? ಅಂತ ನೀವು ಕೇಳಬಹುದು. ಆದರೆ, ಕಡ್ತಲದ ಗಣೇಶ ನನ್ನ ಪಾಲಿಗೆ ನಿಜವಾದ ಶಕ್ತಿಶಾಲಿ ಗಣೇಶ. ಏಕೆಂದರೆ ನಮ್ಮೂರಿಗೆ ಅವನೊಬ್ಬನೇ ಗಣೇಶ (ಈಗ ದರ್ಬುಜೆ ವಿಷ್ಣುಮೂರ್ತಿ ಗೋಪಾಲಕೃಷ್ಣ ದೇವಸ್ಥಾನದಲ್ಲಿಯೂ ಬಂದು ಕುಳಿತಿದ್ದಾನೆ. ಅದು ಬೇರೆ ವಿಚಾರ) ನಮ್ಮ ಪಕ್ಕದ ದೊಂಡೆರಂಗಡಿಗೆ ಹೋಗಿ ಅಲ್ಲಿ ಮೂರು ಗಣೇಶ ಇದ್ದಾರೆ. ಅಜೆಕಾರಿಗೆ ಹೋಗಿ ಅಲ್ಲಿ ಕನಿಷ್ಠ ಇಬ್ಬರು ಗಣೇಶ. ಕಾರ್ಕಳದಲ್ಲಿ ಹಲವು ಗಣೇಶ. ಆದರೆ, ಕಡ್ತಲದಲ್ಲಿ ಎಲ್ಲ ಮನಸ್ಸುಗಳನ್ನು ಒಂದೇ ಕಡೆ ಕೇಂದ್ರೀಕರಿಸಿ ಒಟ್ಟಾಗಿ ಕಲೆಯುವಂತೆ ಮಾಡಿದ್ದಾನೆ ಗಣೇಶ. ಈ ಗಣೇಶನ ವೇದಿಕೆಯಿಂದಲೇ ನಾನು, ನನ್ನಂಥವರು ಮೈಕ್‌ ಮುಂದೆ ನಿರರ್ಗಳವಾಗಿ ಒದರುವುದನ್ನು ಕಲಿತಿದ್ದೇವೆ. ಬಣ್ಣ ಹಚ್ಚಿ ಕುಣಿದಿದ್ದೇವೆ. ನಕ್ಕು ನಲಿದಿದ್ದೇವೆ. ಕೆಲವೊಮ್ಮೆ ಜಗಳವಾಡಿದ್ದೇವೆ. ತೋರಣ, ಲೈಟಿಂಗ್‌, ಮೈಕ್‌ ಕಟ್ಟುವುದರಿಂದ ಹಿಡಿದು ಪ್ರತಿ ಕೆಲಸದಲ್ಲಿಯೂ ಒಂದೈದು ವರ್ಷಗಳ ಹಿಂದಿನವರೆಗೂ ಪಾಲ್ಗೊಂಡಿದ್ದೇನೆ. ಸಮಿತಿಯ ಮೀಟಿಂಗುಗಳಲ್ಲಿ ವಿವಾದಾತ್ಮಕ ಪಾತ್ರ ನಿರ್ವಹಿಸಿದ್ದೇನೆ. ಹಲವರಿಗೆ ಬೈದಿದ್ದೇನೆ. ಹೆಚ್ಚಾಗಿ ಬೈಸಿಕೊಂಡಿದ್ದೇನೆ. ಆದರೆ, ಅವೆಲ್ಲ ನೆನಪುಗಳು ಅಷ್ಟೆ.
 ಆದರೆ, ಈ ಗಣೇಶನಿಗಿರುವ ಸೆಳೆತ ಎಂಥದ್ದು ನೋಡಿ. ಆ ಒಂದೆರಡು ದಿನಗಳ ಮಟ್ಟಿಗೆ ಇಡೀ ಊರನ್ನೇ ಒಂದೆಡೆ ತೆಪ್ಪಗೆ ಕೂರಿಸುತ್ತಾನೆ. ಬೊಬ್ಬರ್ಯನ ಜಾತ್ರೆಯ ದಿನವೂ ಇಡೀ ಊರನ್ನುದ್ದೇಶಿಸಿ ಭಾಷಣ ಮಾಡಲು ಅಸಾಧ್ಯ. ಆದರೆ, ಇಲ್ಲಿ ಸಂಜೆ 5ರಿಂದ ರಾತ್ರಿ 10.30ರ ವರೆಗೆ ಊರಿನ ಪ್ರತಿ ಮನೆಯಿಂದಲೂ ಜನರು ಕಲೆಯುತ್ತಾರೆ. ಯಾರು ಏನೇ ಸಂದೇಶ ನೀಡಲಿ, ಪ್ರಕಟಣೆ ಹೊರಡಿಸಲಿ ಪ್ರೀತಿಯಿಂದ ಕೇಳುತ್ತಾರೆ, ಪಾಲಿಸುತ್ತಾರೆ. ನನ್ನ ದೃಷ್ಟಿಯಲ್ಲಿ ಕಡ್ತಲದಲ್ಲಿ ನಡೆಯುವ ಏಕೈಕ ವಿಶಿಷ್ಟ ಹಬ್ಬ ಈ ಗಣೇಶನದ್ದು. ಇಂಥ ಗಣೇಶನಿಗೆ ನಮ್ಮೂರಿನಲ್ಲಿ 26 ತುಂಬಿದೆ. ಉತ್ಸವಕ್ಕೆ ಒಂದು ಅಚ್ಚುಕಟ್ಟುತನ ಬಂದಿದೆ. 1987 ಇರಬೇಕು. ಊರಿನ ಹಿರಿಯ ಜೀವಗಳು ಒಟ್ಟಾಗಿ ಆಚರಣೆಗೆ ತಂದ ಉತ್ಸವವಿದು. 1990–92ರ ವೇಳೆಗೆ ಗಣೇಶೋತ್ಸವದ ಛದ್ಮವೇಷ ಸ್ಪರ್ಧೆ ನೋಡಲೇಂದೇ ಇಡೀ ಊರು ಸೇರುತ್ತಿತ್ತು. ಅಂದಿನ ಹುಡುಗರೂ ಅಷ್ಟೇ ಅದೆಲ್ಲಿಂದ ಕಲಾತ್ಮಕ ವಿಷಯಗಳನ್ನು ಎತ್ತಿಕೊಂಡು ಬರುತ್ತಿದ್ದರೋ ಗೊತ್ತಿಲ್ಲ. ನನಗಿನ್ನೂ ನೆನಪಿದೆ. ಬಹುಶಃ ಜಿಯಾನಂದ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಉತ್ಸವವದು. ಅಂದು ಉತ್ಸವಕ್ಕೆ ಪಂಚಕಜ್ಜಾಯ ತಯಾರಿಸುವ ಅಡುಗೆ ಭಟ್ಟನ ವೇಷ ಹಾಕಿ ಅಧ್ಯಕ್ಷರೆಲ್ಲಿದ್ದಾರೆ ಎಂದೇ ಪ್ರಶ್ನಿಸಿದ್ದೆ. ಮರುವರ್ಷ ನಮ್ಮ ಪಕ್ಕದಮನೆಯ ಹುಡುಗ ಸಂತೋಷನೂ ಇಂಥದ್ದೇ ಪಾಕಶಾಸ್ತ್ರಜ್ಞನ ಪಾತ್ರ ನಿರ್ವಹಿಸಿದ್ದ.
ಕಡ್ತಲ ಅಜೆಕಾರು ರಸ್ತೆಯಲ್ಲಿ ಉದ್ದಕ್ಕೆ ಕಲ್ಲು ಮರಳು ರಾಶಿ ಮಾಡಿ ಏನೇನೋ ಗೊಣಗುತ್ತಿದ್ದ ಹುಚ್ಚಿ ‘ಬೊಗ್ಗಿ’ಯ ವೇಷ ಹಾಕಿ ವೇದಿಕೆಗೆ ಬಂದವರಿದ್ದಾರೆ. ಬಲೀಂದ್ರನನ್ನು ಕರೆಯುವ ದೀಪಾವಳಿಯನ್ನು ಅಣಕಿಸಿ ‘ಬೈತಮುಟ್ಟೆಗೆ ಸೂಕೊಟ್ರೋ’ ( ಹೊಲಿ ಕೊಟ್ರೋ ಬಲಿ ತಕ್ಕಂಡ್ರೋ ಎಂಬ ಕೂಗು)( ಬೈಹುಲ್ಲಿನ ರಾಶಿಗೆ ಬೆಂಕಿ ಕೊಟ್ಟರು)ಎಂದು ಕನ್ನಡ –ತುಳು ಹಾಸ್ಯ ಮಿಶ್ರಣ ಮಾಡಿ ಗರ್ನಾಲ್‌ ಬಿಸಾಡುವ ಪಾತ್ರ ಮಾಡುತ್ತಿದ್ದ ಕಂಟೆಬೆಟ್ಟಿನ ನಿತ್ಯಾನಂದ ( ಈಗ ಮುಂಬೈ ಸೇರಿದ್ದಾನೆ). ಕೋಲ ಕಟ್ಟಿದವರಿದ್ದಾರೆ, ದರ್ಶನ ಪಾತ್ರಿಗಳಾಗಿದ್ದಾರೆ. ಚಂದಿರನೇತಕೆ ಓಡುವನಮ್ಮಾ ಎಂದು ಚೆಡ್ಡಿಹಾಕಿ ಪುಟ್ಟ ಮಕ್ಕಳ ಹಾಗೆ ಕುಣಿದ ಊರ ಯುವಕರು, ವೇದಿಕೆಯಿಂದಲೇ ಊರಿನ ಹಲವರ ಕಾಲೆಳೆದು ನಗಿಸಿದ್ದು... ಹೀಗೆ ಚಿತ್ರವಿಚಿತ್ರ ವೇಷ ಭೂಷಣ, ಡೈಲಾಗ್‌ಗಳನ್ನು ಹೊಡೆದು ಊರೆಲ್ಲಾ ನಗಿಸಿದ ಮಂದಿ ನಮ್ಮೂರಿನಲ್ಲಿ ಇದ್ದರು (ಇದ್ದಾರೆ ಅನ್ನುವುದಕ್ಕಿಂತ ಇದ್ದರು ಅನ್ನುವುದೇ ಹೆಚ್ಚು ಸೂಕ್ತ).
 ಅಂದು ವಿಷಯ, ವಸ್ತುವಿನ ಆಯ್ಕೆ, ಅಭಿರುಚಿ, ಶಾಸ್ತ್ರ ಶಿಸ್ತಿಗಿಂತಲೂ ನಗಿಸುವುದೊಂದೇ ಪ್ರಧಾನ ಉದ್ದೇಶವಿತ್ತು. ಹೀಗೆ ಸುಮಾರು 19– 20ನೇ ವರ್ಷದ ಗಣೇಶೋತ್ಸವವನ್ನು ನೋಡುತ್ತಲೇ ಬಂದಿದೆ. ಈ ಮಧ್ಯೆ ಒಂದೆರಡು ವರ್ಷ ಸಂಪೂರ್ಣ ಡಲ್ಲು ಹೊಡೆದಿತ್ತು. ಇನ್ನೇನು ಮುಂದಿನ ವರ್ಷ ಗಣೇಶ ಹಬ್ಬವೇ ಇಲ್ಲವೇನೋ ಎಂಬ ಮಟ್ಟಕ್ಕೆ ಹೋಗಿತ್ತು. ಆದರೆ, ಒಂದೆರಡು ವರ್ಷಗಳಿಂದೀಚೆಗೆ ಒಂದು ಅದ್ಭುತವೇ ತೆರೆದುಕೊಂಡಿದೆ. ಭವ್ಯವಾದ ವೇದಿಕೆ. ಸ್ವಲ್ಪ ಡುಮ್ಮನೆನಿಸಿ ಎತ್ತರ ಬೆಳೆದ ಗಣೇಶ, ಲೈಟಿಂಗ್‌, ಧ್ವನಿ ಮಾಧುರ್ಯ ಅಬ್ಬಾ ಒಂದಾ ಎರಡಾ.... ನೋಡಿ ನಿಜಕ್ಕೂ ಖುಷಿಯಾಯಿತು.
 ಆದರೆ? ಅಂದು ಊರಿನ ಹುಡುಗರೇ ಕಲೆತು ಗಣೇಶೋತ್ಸವದಲ್ಲಿ ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಹಾಕುತ್ತಿದ್ದ ಯೋಜನೆಗಳು ಇಲ್ಲವಾಗಿದೆ. ಸುತ್ತ ಮಕ್ಕಳನ್ನು ಸೇರಿಸಿಕೊಂಡು ಸುಶ್ರಾವ್ಯವಾಗಿ ವಿದ್ಯಾಭೂಷಣರ ಧ್ವನಿಯಲ್ಲಿಯೇ ಭಜನೆ ಹಾಡುತ್ತಿದ್ದ ದಿನೇಶನಾಯಕ್‌ ಇಲ್ಲವಾಗಿದ್ದಾರೆ. ಪದ್ಧತಿ ಬಿಡಬಾರದು ಎಂದು ಒಂದೆರಡು ಮಂದಿ ಭಜನೆ ಹಾಡುತ್ತಾರೆ. ಊರಿನ ಅದ್ಭುತ ದಾರ್ಶನಿಕರು ಮರೆಗೆ ಸರಿದಿದ್ದಾರೆ. ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಊರಿನ ಹುಡುಗರು ಕಾಣಿಸುತ್ತಿಲ್ಲ. ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಕ್ಕಳನ್ನು ಬಲವಂತವಾಗಿ ಕರೆತರಬೇಕಾದ ಪರಿಸ್ಥಿತಿಯಿದೆ. ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಬೇರೆ ಊರಿನಿಂದ ದುಡ್ಡುಕೊಟ್ಟು ಕರೆಸಿದ ತಂಡಗಳು ಮೆರೆಯಲು ಅವಕಾಶ ಕೊಟ್ಟಿದ್ದಾರೆ. ಊರ ಹುಡುಗರ ಹಾಸ್ಯ ಸಂಭಾಷಣೆ, ಪಂಚ್‌ಗಳು ಸಭಾಮಂಟಪದ ಹೊರಗಷ್ಟೇ ಕೇಳಿಸುತ್ತಿವೆ.
 ನಮ್ಮದಲ್ಲದ್ದನ್ನು ನಮ್ಮೂರ ಜನ ಅಷ್ಟು ಸುಲಭವಾಗಿ ಸ್ವೀಕರಿಸುವುದಿಲ್ಲ ಎಂಬುದಕ್ಕೆ ಮೊನ್ನೆ ನಡೆದ ‘ವಠಾರ’ ನಾಟಕ ಉದಾಹರಣೆ. ಒಳ್ಳೆಯ ಕಥೆ, ರಂಗ ವಿನ್ಯಾಸ ಇದ್ದರೂ ಪ್ರೇಕ್ಷಕರು ಮೊದಲಾರ್ಧದಲ್ಲಿಯೇ ಖಾಲಿಯಾದರು. ನಮ್ಮೂರ ಹುಡುಗರ ಆಟ– ನಾಟಕ ಹೇಗೇ ಇರಲಿ. ಬೇಕಿದ್ದರೆ ಕಳಪೆಯೇ ಆಗಲಿ ನಮ್ಮ ಮಕ್ಕಳದ್ದು ಎಂಬಂತೆ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇದನ್ನು ನಾವು ತಿಳಿದುಕೊಳ್ಳಬೇಕು. ನನಗೊಂದು ಆಸೆಯಿದೆ. ನಮ್ಮೂರಿನ ಗಣೇಶನ ವೇದಿಕೆ ನಮ್ಮವರಿಗಾಗಿಯೇ ಇರಬೇಕು. ನಮ್ಮ ಹುಡುಗರೇ ಕಾಣಿಸಿಕೊಳ್ಳಬೇಕು. ಇಲ್ಲಿ ಮಿಂಚಿದವರನ್ನು ಬೇರೆ ಊರಿನವರು ಕರೆಯಬೇಕು. ನನ್ನ ಗೆಳೆಯರು ಮಾಡುತ್ತಾರಾ?

 ಪ್ರೀತಿಯಿಂದ
- ಶರತ್‌ ಹೆಗ್ಡೆ, ಕಡ್ತಲ

Wednesday, 9 October 2013

ನಿಮ್ಮ ವಿಷಯಗಳನ್ನೂ ಹಂಚಿಕೊಳ್ಳಿ

ಆತ್ಮೀಯ ಕಡ್ತಲದ ಬಂಧುಗಳೇ, ಇದು ನಿಮ್ಮ ವೇದಿಕೆ. ಇಲ್ಲಿ ನೀವೂ ವಿಷಯಗಳನ್ನು ಹೊಸ ಕಥೆಗಳನ್ನು ಕಡ್ತಲದ ರೋಚಕ ಘಟನೆ, ಸಂಗತಿ,ನೆನಪು, ಕಥೆಗಳನ್ನು ಹಂಚಿಕೊಳ್ಳಬಹುದು. ನಿಮ್ಮಲ್ಲಿ ಕಡ್ತಲಕ್ಕೆ ಸಂಬಂಧಿಸಿದ ಅಪರೂಪದ ಫೋಟೋ, ವಿಡಿಯೋಗಳು, ಇತಿಹಾಸ, ಅಪರೂಪದ ವ್ಯಕ್ತಿ ಪರಿಚಯ (ತೆರೆಮರೆಯ ಜನಸಾಮಾನ್ಯನನ್ನೇ ಗುರುತಿಸಿ) ಇದ್ದರೆ ಕಳುಹಿಸಿ. ಬರಹಗಳನನ್ನು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪ್‌ ಮಾಡಿ ಕಳುಹಿಸಿ. ಇ ಮೇಲ್‌ ವಿಳಾಸ: sharathkadthala@gmail.com

ಒಂದಿಷ್ಟು ಜೋಕು, ಕಚಗುಳಿ

ಇತ್ತೀಚೆಗೆ ಹೆಣ ಇಟ್ಟುಕೊಂಡು ಪ್ರತಿಭಟನೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಅಂತದ್ದರಲ್ಲಿ ಒಂದು ದಿನ ವರದಿಗಾರನಿಗೆ ಕರೆ ಬಂತು.
ಸಾರ್ ನಾವು ಹೆಣ ಇಟ್ಟು ಪ್ರತಿಭಟನೆ ಮಾಡ್ಬೇಕು ಅಂತ ಇದ್ದೀವಿ.
ವರದಿಗಾರ: ಸರಿ ಮಾಡಿ ಏನೀಗ?
ಪ್ರತಿಭಟನಕಾರ; ಸಾರ್ ಹೆಣ ಇಟ್ಕೊಂಡು ಪ್ರತಿಭಟನೆ ಮಾಡ್ತ ಇದ್ದೀವಿ ನೀವೇ ಬರದಿದ್ರೆ ಹೇಗೆ ಸಾರ್?

ಸಬ್‌ಎಡಿಟರ್ ಸುಬ್ರಾಯ ಸತ್ತ ಮೇಲೆ...

ಬ್‌ಎಡಿಟರ್ ಸುಬ್ರಾಯ ಒಂದು ದಿನ ಇದ್ದಕ್ಕಿದ್ದಂತೆ ಗೊಟಕ್ ಎಂದ. ಅವನು ಹೇಗೆ ಸತ್ತ? ಯಾರಾದರೂ ಕಚಕ್ ಮಾಡಿದರೇ? ಇಲ್ಲ ಹಾರ್ಟ್ ಅಟ್ಯಾಕ್ ಆಯಿತೇ? ಪತ್ರಿಕೋದ್ಯಮ ಎಂಬ ತ್ರಿಶಂಕು ವ್ಯವಸ್ಥೆಯ ಕಿರಿಕಿರಿಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡನೋ... ಹೇಗೆ? ಅದೇನೋ ಗೊತ್ತಿಲ್ಲ. ಅಂತೂ ಸತ್ತ. ಮರಣೋತ್ತರ ವರದಿ ಬೇಕಾದರೆ ಯಾವುದಾದರೂ ಸುದ್ದಿವಾಹಿನಿಯವರು ಕೊಟ್ಟಾರು.
   ಸತ್ತ. ಸತ್ತವ ನೇರವಾಗಿ ಯಮನ ಇಂಟರ್‌ವ್ಯೂ ಕೊಠಡಿಗೆ ಹೋದ. ಯಮಧರ್ಮನಿಗೆ ಅವನನ್ನು ಕಂಡಾಗಲೇ ಗೊತ್ತಾಯ್ತು. ಅರೇ ಅವನು ನಮ್ಮ ಸುಬ್ರಾಯ ಅಲ್ವಾ? ಬಯೋಡೇಟಾ ಇಲ್ಲದೇ ಪರಿಚಯ!
ಯಮ ಹಾಗೆ ಕೇಳಿದಾಗ, ಈತನೇನಾದರೂ ಚಿತ್ರಗುಪ್ತನ ಶಾಪಗ್ರಸ್ತ ಮರಿಮೊಮ್ಮಗ ಮಾನವನಾಗಿ ಬಾಳಿ ವಾಪಸಾಗಿರಬಹುದೇ? ಎಂಬ ಶಂಕೆ ಅಲ್ಲಿನವರಿಗಾಗಿತ್ತು.
   ಸುಬ್ರಾಯ ಬೆಳೆಸಿಕೊಂಡ ಲಿಂಕು ಹಾಗಿತ್ತು. ಭೂಲೋಕದ ಯಮ ಪ್ರತಿನಿಧಿಗಳೆಲ್ಲ ಅವನಿಗೆ ಪರಿಚಯ. ದೊಡ್ಡಾಸ್ಪತ್ರೆಯ ಹೆಡ್ಡಾಕ್ಟ್ರುಗಳು, ಬಸ್, ಅದಿರು ಲಾರಿ, ಅಂಬುಲೆನ್ಸ್ ಡ್ರೈವರ್‌ಗಳು, ಪೊಲೀಸರು... ಹೀಗೆ. ದಿನಾ ಅವರಿಗೆ ಫೋನ್ ಮಾಡಿ ಸತ್ತವರ ಲೆಕ್ಕ ಪಡೆದು ಯಥಾವತ್ತಾಗಿ ಬರೆದು ಕೊಲೆ, ಆತ್ಮಹತ್ಯೆ, ದುರ್ಮರಣ, ಅಪಘಾತ... ಹೀಗೆ ಹೆಡ್‌ಲೈನ್ ಕೊಟ್ಟು ಮರುದಿನ ಓದುಗರ ಮುಂದಿಟ್ಟು `ಓದಿರಿ ಬಳಿಕ ಇವರ ತಿಥಿ ನೀವೇ ಮಾಡಿರಿ' ಎಂದು ಪರೋಕ್ಷ ಸೂಚನೆ ಕೊಡುತ್ತಿದ್ದ.
ಸುಬ್ಬರಾಯನ ಇಂಥ ಸುದ್ದಿ ಸಂಗ್ರಹ, ವರದಿ ಮಂಡನೆ ಯಮನಿಗೇ ಆಶ್ಚರ್ಯ ಉಂಟು ಮಾಡಿತ್ತು. ಅರೇ ಪತ್ರಿಕಾ ವರದಿಯಲ್ಲಿ ಸತ್ತಿದ್ದಾನೆ ಎಂದು ಬರೆಯಲಾದ ವ್ಯಕ್ತಿ ನನ್ನಲ್ಲಿಗೆ ಬರಲೇ ಇಲ್ಲವಲ್ಲ. ಈ ಪ್ರೇತ ಹೇಗೆ ಮಿಸ್ ಆಯ್ತು? ತನ್ನ ದ್ವಾರಪಾಲಕರು ಲಂಚ ಪಡೆದು ಸ್ವರ್ಗಕ್ಕೇ ಕಳುಹಿಸಿದರೇ? ಹೀಗೆ ಹತ್ತಾರು ಪ್ರಶ್ನೆಗಳು ಯಮನ ತಲೆ ಕೊರೆಯುತ್ತಿದ್ದವು. ದಿಢೀರನೆ ತನ್ನ ಪ್ರತಿನಿಧಿಗಳ ಸಭೆ ಕರೆದು, ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದ(ಪತ್ರಿಕಾ ಸಂಪಾದಕರು ಅಂದು ತಮ್ಮ ಪತ್ರಿಕೆಯಲ್ಲಿ ತಪ್ಪಿಹೋದ ಸುದ್ದಿಗಾಗಿ ತಮ್ಮ ವರದಿಗಾರರನ್ನು ಬೈಯುತ್ತಾರಲ್ಲಾ ಹಾಗೆ) ಈ ರೀತಿ ಸುಬ್ರಾಯನ ಲಿಂಕು, ಖ್ಯಾತಿ ಅಮೆರಿಕ ಬಿಡಿ, ಯಮಲೋಕದವರೆಗೂ ಹಬ್ಬಿತ್ತು. ಹಾಗಾಗಿ, ಆತ ಇನ್‌ಪ್ಲ್ಯೂಯೆನ್ಸ್ ಕೋಟಾದಡಿ ಬಂದ.
   ತನ್ನ ಜೀವಿತಾವಧಿಯಲ್ಲಿ ಬದುಕಿದ್ದವರನ್ನು ಸತ್ತಿದ್ದಾರೆ ಎಂದು ಬರೆದದ್ದು, ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆದದ್ದು ಇತ್ಯಾದಿ ಪಾಪಗಳಿಗೆ ಒಂದು ವಾರ ಕಾಲ ಯಾವುದೇ ಪತ್ರಿಕೆ ಓದದಂತೆ, ಚಾನೆಲ್ ನೋಡದಂತೆ, ಬರೆಯದಂತೆ ತಾಕೀತು ಮಾಡಲಾಯಿತು. ಕೆಲವು ವರದಿಗಳ ಪ್ರತಿ ತರಿಸಿ ಅದರಲ್ಲಿ ಕಡ್ಲೆಪುರಿ, ಚಿತ್ರಾನ್ನ ಹಾಕಿ ತಿನ್ನಿಸಲಾಯಿತು.
   ವಾರ ಕಳೆದ ಬಳಿಕ ಯಮ ಒಂದು ಪ್ರಸ್ತಾವ ತೆಗೆದ. ನಿನ್ನ ಶಿಕ್ಷೆಯ ಅವಧಿ ಮುಗಿದಿದೆ. ಇನ್ನು ನೀನು ಸ್ವರ್ಗಕ್ಕೆ ಹೋಗಬಹುದು. ಆದರೆ, ಒಂದು ಕಂಡೀಶನ್, ನೀನು ಅಲ್ಲಿ ಒಂದು ಪತ್ರಿಕೆ ತರಬೇಕು. ಅದರಲ್ಲಿ ಸಂಪಾದಕ, ಉಪ(ದ್ರ) ಸಂಪಾದಕ ಎಲ್ಲಾ ನೀನೆ. ಬೇಕಿದ್ದರೆ ಸ್ವರ್ಗ ನರಕದ ಕೆಲವರನ್ನು ಸಹಾಯಕ್ಕಾಗಿ ಪಡೆಯಬಹುದು!!
   ಸುಬ್ರಾಯ ಒಳಗೊಳಗೇ ಗೊಣಗಿದ. ಅಯ್ಯೋ ವಿಧಿಯೇ ಬಿಟ್ಟೆನೆಂದರೂ ಬಿಡದೀ ಡೆಸ್ಕು. ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ. `ಪತ್ರಿಕೋದ್ಯಮ ಒಳ್ಳೆಯ ಕ್ಷೇತ್ರ. ಕೆಲವು ಕ್ರಿಮಿಕೀಟಗಳನ್ನು ಹೊರತುಪಡಿಸಿ' ಇದು ಅವನು ಕಂಡ ವಾಸ್ತವ. ಅಂತೂ ಆತ ಒಪ್ಪಿದ. ಯಮ ಸ್ವರ್ಗದಲ್ಲಿಯೇ ಒಂದು ಕಚೇರಿ, ಕಂಪ್ಯೂಟರುಗಳು ಎಲ್ಲವನ್ನೂ ಏರ್ಪಾಡುಗೊಳಿಸಿದ. ನರಕದಲ್ಲಿ ಮುದ್ರಣಾಲಯ ಇತ್ತು.
   ಪತ್ರಿಕೆ ಆರಂಭದ ದಿನ ಜೇಮ್ಸ ಆಗಸ್ಟಸ್ ಹಿಕ್ಕಿ ಬಂದು ಸುಬ್ರಾಯನಿಗೆ `ಯು ಆರ್ ವೆರಿ ಲಕ್ಕಿ' ಎಂದು ಕೈಕುಲುಕಿದ. ಯಂಗ್ ಇಂಡಿಯಾ ಸಂಪಾದಕ ಮಹಾತ್ಮ ಗಾಂಧೀಜಿ, ಕಚೇರಿ ಉದ್ಘಾಟಿಸಿ `ಸುಬ್ರಾಯ ಹೆಂಗ್ ಬಂದೀಯಾ...' ಕೇಳಿದರು.
ಭೂಲೋಕದಲ್ಲಿ ಪತ್ರಿಕಾ ಕ್ರಾಂತಿಯನ್ನೇ ಮಾಡಿದರೂ ನಮಗೊಂದು ಪತ್ರಿಕೆ ತೆರೆಯಲು ಇಲ್ಲಿ ಆಗಲಿಲ್ಲ. ಯಕಶ್ಚಿತ್ ಒಬ್ಬ ಉಪ ಸಂಪಾದಕ ಪತ್ರಿಕೆ ತೆರೆಯುವುದು ಆಶ್ಚರ್ಯ ಮತ್ತು ಸಂತೋಷ ಎಂದು ಅಲ್ಲಿ ಬಂದಿದ್ದ ಘಟಾನುಘಟಿ ಪತ್ರಕರ್ತರು ಕೊಂಡಾಡಿದರು.
   ಸುಬ್ರಾಯ ನರಕದ ಮುದ್ರಣಾಲಯಕ್ಕೆ ಭೇಟಿ ನೀಡಿದ. ಭೂಲೋಕದಲ್ಲಿ ನಂಬರ್ 1 ಪಟ್ಟಕಟ್ಟಿಕೊಂಡಿದ್ದವರು, ಅಪರಾಧ ವರದಿಗಾರರು ಮುದ್ರಣಾಲಯದಲ್ಲಿ ಪ್ಲೇಟ್ ಜೋಡಿಸುತ್ತಿದ್ದರು. ಕೆಲವರು ಶಾಯಿ ಒರೆಸುತ್ತಿದ್ದರು. ಜೀವಿತಾವಧಿಯಲ್ಲಿ ಆಗಾಗ `ಪ್ಲೇಟ್' ಬದಲಾಯಿಸಿದ್ದು, ಬಣ್ಣಹಚ್ಚಿ ಬರೆದಿದ್ದಕ್ಕೆ ಈ ಶಿಕ್ಷೆ.
   ಅಂತೂ ಸ್ವರ್ಗ, ನರಕ, ಶೈಮಿನೀಪುರ, ವೈಕುಂಠ, ಕೈಲಾಸ, ಇಂದ್ರಲೋಕದ ಅತ್ಯಧಿಕ ಪ್ರಸಾರದ ಏಕೈಕ ಪತ್ರಿಕೆ `ಪಾಶ' ಆರಂಭವಾಯಿತು. ಸಿನಿಮಾ ಪುರವಣಿಗೆ ಬಿಪಾಶ ಎಂದು ಹೆಸರಿಸಲಾಯಿತು. ರಂಭೆ, ಊರ್ವಶಿ ಪತ್ರಿಕೆಯ ಬ್ರಾಂಡ್ ಅಂಬಾಸಡರ್‌ಗಳಾದರು. ಚಿತ್ರಗುಪ್ತನಿಗೆ ಪತ್ರಿಕಾ ಮಾರುಕಟ್ಟೆ ವೃದ್ಧಿ ಮಾಡುವ ಹೆಚ್ಚುವರಿ ಕೆಲಸ ಸಿಕ್ಕಿತು. ಇಬ್ಬರು ದೂತರು ತಾತ್ಕಾಲಿಕ ವರದಿಗಾರರಾದರು. ಪತ್ರಿಕೆ ಸಾಗಾಟಕ್ಕೆ ಭೂಲೋಕದಿಂದ ಹೆಚ್ಚುವರಿಯಾಗಿ ಎಮ್ಮೆ, ಕೋಣ (ಅದರ ಹಾಗೆ ಬದುಕಿದ್ದವರನ್ನೂ) ತರಿಸಲಾಯಿತು.
   ಸುದ್ದಿ ಮಾಧ್ಯಮವೊಂದು ಜನ್ಮ ತಳೆಯುವುದೇ ತಡ. ಅದುವರೆಗೆ ಬಾಲ ಮುದುರಿಕೊಂಡಿದ್ದ ಪ್ರಚಾರಪ್ರಿಯರು ಹಸಿದ ನಾಯಿಗಳಂತೆ ಕಾದಿರುತ್ತಾರೆ. ಅವರಿಗೂ ಒಂದು ಅವಕಾಶ ಸಿಕ್ಕಿತು.
   ಇಂದಿರಾರಿಂದ ರಾಜೀವ್‌ವರೆಗಿನ ಕುಟುಂಬ ರಾಜಕಾರಣಿಗಳು, ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ವೈ.ಎಸ್.ಆರ್... ಕೆಲವು ಚಿಲ್ಲರೆಗಳು ಆಗಾಗ ಪತ್ರಿಕಾಗೋಷ್ಠಿ ಕರೆದು ಭೂಲೋಕದ ತಮ್ಮ ರಾಜಕೀಯ ವೈರಿಗಳನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಪತ್ರಿಕೆ ಭೂಲೋಕಕ್ಕೆ ಹೋಗುವುದಿಲ್ಲವಾದ್ದರಿಂದ ಯಾರೂ ಪ್ರತಿಕ್ರಿಯಿಸುತ್ತಿರಲಿಲ್ಲ. ತಾಕತ್ತಿದ್ದರೆ ದೇವೇಗೌಡರೂ ಇಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲೆಸೆಯುತ್ತಿದ್ದರು.
   ಜೆ.ಎಚ್. ಪಟೇಲರಂತೂ ವಿಜಯ್‌ಮಲ್ಯ ಥರ ಒಮ್ಮೆ ಸಿಲ್ಕ್‌ಸ್ಮಿತಾ, ಸೌಂದರ್ಯ, ಕಲ್ಪನಾ... ಒಂದೊಂದು ದಿನ ಒಬ್ಬೊಬ್ಬರ ಜತೆ ಕಾಣಿಸಿಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅದೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
ಅಪರಾಧ ಸುದ್ದಿಗಳಿಗೂ ಕೊರತೆಯಿರಲಿಲ್ಲ. ನರಕದಲ್ಲಿ ನಡೆಯುವ ಗ್ಯಾಂಗ್‌ವಾರ್‌ಗಳು, ಅತೃಪ್ತ ಆತ್ಮಗಳನ್ನು ಭೂಮಿಯಲ್ಲೇ ತಡೆಹಿಡಿಯುವ ಮಾಂತ್ರಿಕರ ಬಗ್ಗೆ ತನಿಖಾ ವರದಿಗಳು, ಯಮದೂತರು ನಿಗದಿತ ವ್ಯಕ್ತಿಯ ಬದಲಿಗೆ ಇನ್ಯಾರನ್ನೋ ಕರೆತರುವುದು ಇತ್ಯಾದಿ ಪ್ರಕಟವಾಗುತ್ತಿದ್ದವು. ಯಮನಿಗೆ ಸಂಬಂಧಿತ ವರದಿಗಳು ಸೆನ್ಸಾರ್ ಆಗುತ್ತಿದ್ದವು.
ಭೂಲೋಕದಲ್ಲಿ ಸಂಭವಿಸಿದ ಸಾವಿನ ಸುದ್ದಿಯನ್ನು ಹಾಗೇ ಬರೆಯುವಂತಿರಲಿಲ್ಲ. ಬದಲಾಗಿ ಆತ್ಮಗಳ ಆಗಮನ, ಯಮಲೋಕಕ್ಕೆ ಸುರಕ್ಷಿತ ಆಗಮನ. ಭಾರೀ ಸಾವು ನೋವುಗಳಾದರೆ, ಯಮಲೋಕಕ್ಕೆ ಆತ್ಮಗಳ ಆಗಮನ ಹೆಚ್ಚಳ... ಹೀಗೆ ಆಕರ್ಷಕ ಶೀರ್ಷಿಕೆ ಕೊಟ್ಟು ಅದನ್ನೊಂದು ಸಂಭ್ರಮ ಎಂಬಂತೆ ಬರೆಯಬೇಕಿತ್ತು.
   ಇಂತಿಪ್ಪ `ಪಾಶ'ದಲ್ಲಿ ಒತ್ತಡಗಳಿಗೇನೂ ಕೊರತೆಯಿರಲಿಲ್ಲ. ಕಿರಿಕಿರಿ, ಬೆದರಿಕೆ ಬರುತ್ತಲೇ ಇದ್ದವು. ಒಮ್ಮೆ ರಾಜಕುಮಾರಿ ಡಯಾನಾ ಅಂತೂ ಭೂಮಿಯಲ್ಲಿ ನೆಮ್ಮದಿಯಾಗಿ ಬಾಳೋದಿಕ್ಕೆ ನಿಮ್ಮಂಥ ಪೇಪರ್‌ನವರು ಬಿಡಲಿಲ್ಲ. ಇಲ್ಲಿಯೂ ನನ್ನ ಫೋಟೊವನ್ನು ಅಷ್ಟು ಕೆಟ್ಟದಾಗಿ ಹಾಕಿದ್ದೀರಿ ಎಂದು ರಂಪ ಮಾಡಿದ್ದಳು.
 ಈ ನಡುವೆ ಜಾಹೀರಾತುಗಳೂ ಬರಲಾರಂಭಿಸಿದವು.
   ಭೂಲೋಕಕ್ಕೆ ಹೋಗಲಿಚ್ಛಿಸುವ ಆತ್ಮಗಳಿಗೆ ಸದಾವಕಾಶ. ನೀವು ಬಯಸುವ ದೇಹ ಹೊಂದಬಹುದು. ಮಾನವ, ದಾನವ, ಕುರಿ, ಕೋಳಿ, ಹಂದಿ, ಕತ್ತೆ... ಹೀಗೆ ಯಾವುದೇ ಜನ್ಮ ಎತ್ತಬಹುದು ಎಂದು ಏಜೆಂಟರು ಆಹ್ವಾನ ನೀಡುತ್ತಿದ್ದರು. ಇದಕ್ಕೆ ನಿಗದಿತ ಶುಲ್ಕ ಭರಿಸಬೇಕು. ಯಮಲೋಕದ ‘ಜನಸ್ನೇಹಿ’/ನೆಮ್ಮದಿ ಕೇಂದ್ರದಲ್ಲಿ ಸಾಲುನಿಂತು ಅರ್ಜಿ ಸಲ್ಲಿಸಿ, ಪಾಪ-ಪುಣ್ಯಗಳ ಅಕೌಂಟ್ ತೆರೆದು ಪ್ರಮಾಣ ಪತ್ರ ಪಡೆಯಬೇಕಿತ್ತು. ಈ ಕೇಂದ್ರಗಳದ್ದೂ ಯಮ(!)ಯಾತನೆಯೇ ಆಗಿತ್ತು. ಯಾರ್ದ್ದದೋ ಲೆಕ್ಕ ಯಾರಿಗೋ ಹೋಗುವ ಅವಾಂತರಗಳೂ ನಡೆಯುತ್ತಿದ್ದವು.
   ಬ್ರಹ್ಮನಿಂದ ಹೊಸದಾಗಿ ಬಿಡುಗಡೆಯಾಗುವ ಆತ್ಮಗಳು ಯಮಕರಣಿಕರ ಬಳಿ ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕಿತ್ತು.
ಯಮಲೋಕ, ನರಕಲೋಕಕ್ಕೆ ಹೊಸ ನೇಮಕಾತಿ, ಎಣ್ಣೆ ಕಾಯಿಸಲು, ಹೋಮ-ಕುಂಡ ನಿರ್ಮಾಣಕ್ಕೆ ಟೆಂಡರು, ಆತ್ಮ ಮಿಲನ(ರೇವ್ ಪಾರ್ಟಿ) ಜಾಹೀರಾತುಗಳು ಸಾಕಷ್ಟು ಬರುತ್ತಿದ್ದವು.
ವೈಕುಂಠ, ಕೈಲಾಸ, ಇಂದ್ರಲೋಕದಿಂದ ನಾರದರು ಆಗಾಗ ಪತ್ರಿಕಾ ವರದಿ, ಪ್ರಕಟಣೆ ತರುತ್ತಿದ್ದರು. ಬಂದವರು ಹಾಗೇ ಹೋಗುತ್ತಿರಲಿಲ್ಲ. ಸುಬ್ರಾಯನ ತಲೆಗೊಂದು ಸುದ್ದಿಹುಳ ಬಿಟ್ಟು ಹೋಗುತ್ತಿದ್ದರು.
ವೈಕುಂಠ, ಇಂದ್ರಲೋಕದ ಸುದ್ದಿಗಳನ್ನು ಹಾಗೇ ಬಿಡುವಂತಿರಲಿಲ್ಲ. ಕಾರ್ಪೊರೇಟ್ ಜಗತ್ತು ಅದು. ಸುದ್ದಿ ಬಿಟ್ಟರೆ ಯಮನಿಗೆ ವೈರ್‌ಲೆಸ್ ಹೋಗುತ್ತಿತ್ತು. ಜಾಹೀರಾತು ಸ್ಥಗಿತಗೊಳ್ಳುತ್ತಿತ್ತು.
   ರಂಬೆ, ಊರ್ವಶಿ, ಮೈಕೆಲ್ ಜಾಕ್ಸನ್ ನೃತ್ಯಗಳು, ಒಡ್ಡೋಲಗ ಇತ್ಯಾದಿ ಭಾರೀ ಪ್ರಮಾಣದ ಜಾಹೀರಾತು ತರುತ್ತಿದ್ದವು.
ಇದನ್ನೆಲ್ಲಾ ಬರೆದೂ ಬರೆದೂ ಸುಬ್ರಾಯನ ತಲೆ ಚಿಟ್ಟು ಹಿಡಿದಿತ್ತು. ಇತ್ತೀಚೆಗೆ ಬಿಪಿಯೂ ಶುರುವಾಗಿದೆ. ಅತ್ತ ಸಾಯುವಂತೆಯೂ ಇಲ್ಲ. ಅವರಿವರ ಭಾಷಣ ಬರೆದೇ ಜೀವಿತಾವಧಿ ಕಳೆದ ಅವನಿಗೆ ಸಾವಿನ ನಂತರವೂ ಅದೇ ಕಾಯಕ. ಅಯ್ಯೋ... ವಿಧಿಯೇ ಎಂದೂ ಕೂಗುವಂತಿಲ್ಲ. ಸುಬ್ರಾಯನಂತೆ ಬದುಕಿದ್ದವರೂ ಇಲ್ಲಿ ಅವನ ಜತೆಯಾಗಿದ್ದರು.
ಅಸಹಾಯಕ ಸುಬ್ರಾಯ ದೀರ್ಘ ರಜೆಗಾಗಿ ಯಮನನ್ನು ಕೇಳಿದ. ಆದರೆ, ಆತ ಕೆಲವೇ ದಿನಗಳಿಗೆ ರಜೆ ಸೀಮಿತಗೊಳಿಸಿದ. ಯಮಧರ್ಮಾ ಇನ್ನು ನನ್ನಿಂದಾಗದು. ದಯವಿಟ್ಟು ರಜೆ ದಯಪಾಲಿಸು ಎಂದು ಅಂಗಲಾಚಿದ. ಯಮ ಒಪ್ಪಲಿಲ್ಲ. ಯಾರೂ ಇಲ್ಲದಿದ್ದರೂ ಪತ್ರಿಕೆ ನಡೆಯುತ್ತದೆ. ಸಾಧ್ಯವಾದರೆ ಕೆಲಸ ಮಾಡು. ಇಲ್ಲವಾದರೆ ತೊಲಗು ಎಂದು ಅದ್ಯಾವುದೋ ಮೂಡ್‌ನಲ್ಲಿದ್ದ ಯಮ ಗುಡುಗಿದ.
  ಸುಬ್ರಾಯನಿಗೆ ಸುತ್ತ ಕತ್ತಲು ಕವಿದಂತಾಯಿತು. ಅಷ್ಟು ವರ್ಷಗಳ ಪರಿಶ್ರಮ, ಪತ್ರಿಕೆ ಕಟ್ಟಿ ಬೆಳೆಸಿದ ರೀತಿ. ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಅನಿಸಿತು. ಎಂಥ ಮಾತು ಯಮನಿಂದ. ಆದರೂ... ತೊಲಗು ಎಂದ. ಸರಿ ಕೊನೆಗೂ ಮುಕ್ತಿ ಸಿಕ್ಕಿತಲ್ಲಾ ಎಂದು ಸುಬ್ರಾಯ ತಲೆತಗ್ಗಿಸಿ ಹೊರಟ.
ನಿಲ್ಲು! ಎಂದು ಗರ್ಜಿಸಿದ ಯಮ... ನೀನು ಹಾಗೆಯೇ ಹೋಗುವಂತಿಲ್ಲ. ಮತ್ತೆ ಭೂಲೋಕಕ್ಕೆ ತೆರಳಿ ಯಾವುದಾದರೂ ಪತ್ರಿಕೆಯ ಪತ್ರಕರ್ತನಾಗಿಯೇ ಬದುಕು ಎಂದು ವರಸಹಿತ ಶಾಪಕೊಟ್ಟ.
ಸುಬ್ರಾಯ ಯಮಸ್ಥಾನದಲ್ಲಿಯೇ ಕುಸಿದುಬಿದ್ದ.


ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ

ಕಡ್ತಲದ ರೂಪಕ ಅಂಗಡಿ ಮೋನಣ್ಣ


ಕಡ್ತಲ ಎಂದರೆ ಅದು ಬರೀ ಊರಲ್ಲ. ಅದೇ ಒಂದು ಕಥೆ. ಕಾಲ ಸನ್ನಿವೇಶಗಳು, ಪಾತ್ರಗಳು ಬದಲಾಗುತ್ತಲೇ ಇರುತ್ತವೆ.
ಹೊಸ ಪಾತ್ರಗಳು ಬರುತ್ತವೆ. ಹಳೇ ಪಾತ್ರಗಳು ಕಾಲದ ಮರೆಗೆ ಸರಿಯುತ್ತವೆ.
ಈ ಬಾರಿ ನಿಮಗೆ ಮೋನಣ್ಣನನ್ನು ಪರಿಚಯಿಸುತ್ತೇನೆ.
ಮೋನಣ್ಣ ನಮ್ಮ ತಲೆಮಾರಿನ ಹಿರಿಯ ಕಂಬ. ನಾವು ಪ್ರೈಮರಿ ಶಾಲೆಗೆ ಹೋಗುತ್ತಿದ್ದ ದಿನಗಳಿಂದ ಇಂದಿನವರೆಗೆ ಮೋನಣ್ಣನನ್ನು ನೋಡುತ್ತಲೇ ಇದ್ದೇನೆ. ಅವರು ಬೆಳೆದ ಪರಿ. ಎಲ್ಲರಿಗೂ ಬೇಕಾಗುವ ವ್ಯಕ್ತಿತ್ವ. ಎಲ್ಲರಿಗೂ ಬೈದುಕೊಳ್ಳಲು ಅವರೇ ಬೇಕು. ಪ್ರೀತಿಯಿಂದ ಮಾತನಾಡಿ ಒಂದು ಲೋಟ ಚಾ, ಅಥವಾ ಬೇಸಗೆಯಾದರೆ ಎಳ್ಳು ಜ್ಯೂಸೋ ಕುಡಿದು ತಣ್ಣಗಾಗಲೂ ಮೋನಣ್ಣನ ಅಂಗಡಿಯೇ ಬೇಕು.
ಮೋನಣ್ಣನ ಅಂಗಡಿ ಅಂದರೆ ಊರಿನ ಸುದ್ದಿ ಕೇಂದ್ರ. ಮಾಹಿತಿ ಕೇಂದ್ರ, ಸಂಪರ್ಕ ವ್ಯವಸ್ಥೆ. ಬೇಡ ಬಿಡಿ ಒಂದು ಪುಟ್ಟ ವಿಧಾನಮಂಡಲ ಎಂದೇ ಕರೆಯೋಣ.
ಏಕೆಂದರೆ ಇಲ್ಲಿ ಎಲ್ಲರೂ ಸೇರುತ್ತಾರೆ. ಆ ಪಕ್ಷ ಈ ಪಕ್ಷದವರೂ ಎದುರು ಬದುರಾಗಿ ಮಾತು ಆರಂಭಿಸುತ್ತಾರೆ. ಚಹಾ ಸೊರ ಸೊರ ಹೀರುತ್ತಾ...
ಮಾತು, ಚರ್ಚೆ ತಾರಕಕ್ಕೆ ಏರುತ್ತದೆ. ಕೊನೆಗೆ ಮೋನಣ್ಣನದ್ದು ’‘ವಿಧಾನಸೌಧದ’ ಸ್ಪೀಕರ್‌ ಪಾತ್ರ. ‘ಒರ ಮನ್ಪಂದೆ ಕುಲ್ಲುಲೇ, ಎಂಚಿನ ಚೊರೆ ಚೊರೆ ಪಾತೆರ್ನು’ ಅಂತ ಹೇಳಿ ಎರಡೂ ಪಕ್ಷದವರ ಬಾಯಿ ಮುಚ್ಚಿಸುತ್ತಾರೆ. ಮಾತಿನಿಂದ ಎಲ್ಲಾದರೂ ವಿವಾದ ಸೃಷ್ಟಿಯಾಗುತ್ತದೆ ಎಂದಾದರೆ ಅಲ್ಲಿನ ಸಂದರ್ಭವನ್ನೇ ನಿವಾರಿಸುತ್ತಾರೆ.
ಹೀಗೆ ಮೋನಣ್ಣನದು ಅಜಾತಶತ್ರು ವ್ಯಕ್ತಿತ್ವ (ಇಲ್ಲವಾದರೆ ಕಡ್ತಲದಲ್ಲಿ ಕಾಲಮಾಡುವುದು ಸುಲಭವೇ?)
ಪಂಚಾಯಿತಿಯಲ್ಲಿ ಯಾರೇ ಆಡಳಿತಕ್ಕೆ ಬರಲಿ ಮೋನಣ್ಣನ ಚಾ ಇಲ್ಲದೇ ಮೀಟಿಂಗು ಇಲ್ಲ. ಗಣೇಶೋತ್ಸವ, ಎಸ್‌ಡಿಎಂಸಿ ಸಭೆ, ಟೈಂಪಾಸ್‌ ಟೀ ಹೀಗೆ ಒಂದಾ ಎರಡಾ. ಒಂದು ಲೋಟ ಚಹಾ ಮತ್ತು ಬನ್ಸ್‌ ಪೋಡಿಯೋ ಕೊಟ್ಟು ಬಂದವರನ್ನು ತಣ್ಣಗಾಗಿಸುತ್ತಾರೆ.
ಇಂತಿಪ್ಪ ಮೋನಣ್ಣ ನಮ್ಮೂರಿನ ದಶಕಗಳ ವ್ಯಕ್ತಿ. ಹಿರಿಯ ತಲೆಯ ಅಜ್ಜ ಅಜ್ಜಿಯರಿಗೆ ಒಂದು ಕಾಟು ಬೀಡ ಕಟ್ಟಿಕೊಟ್ಟು ಅಜ್ಜೆರೆ ’ಚಿಂಯ್ಯೆ’ (ತಿನ್ಲೆ– ತಿನ್ನಿರಿ) ಎನ್ನುತ್ತಾ ಕೊಟ್ಟು ಕಳುಹಿಸುತ್ತಾರೆ. ಇದೇ ಮೋನಣ್ಣನ ಅಂಗಡಿ ಮುಂದೆ ಬಸ್ಸಿಗೆ ಕಾಯುತ್ತಾ ಪೇಪರ್‌ ಓದಿ ಶಾಲೆಗೆ ಹೋದವರು ಇಂದು ದೇಶದ ಮಿಲಿಟರಿಯಿಂದ ಹಿಡಿದು ಉನ್ನತ ಹುದ್ದೆಗಳವರೆಗೆ ಏರಿದವರಿದ್ದಾರೆ. ಅದೇ ಪೇಪರು ಓದಿ ಪೇಪರಿನಲ್ಲೇ ಕೆಲಸಕ್ಕೆ ಸೇರಿದ ನನ್ನಂಥವರಿದ್ದಾರೆ.
80ರ ದಶಕ ನೆನಪಾಗುತ್ತದೆ. ಲಿಂಗರಬೆಟ್ಟಿನ ಮೋಹನದಾಸ ನಾಯಕ್‌ ಅಂದು ನಾಲ್ಕು ಚಕ್ರದ ತಳ್ಳು ಗಾಡಿಯ ಗೂಡಂಗಡಿಯನ್ನು ಬಸ್‌ಸ್ಟ್ಯಾಂಡ್‌ ಪಕ್ಕ ಇಟ್ಟರು. ಇಡೀ ಊರಿಗೆ ಬರುವ ಒಂದೇ ಉದಯವಾಣಿ ಪೇಪರು, ಬೀಡಾ, ಚಾಕಲೇಟು, ಬೀಡಿ, ಗೋಳಿ ಸೋಡ ಇವಿಷ್ಟೇ ಅಂದಿನ ಮೋನಣ್ಣನ ‘ಬಿಗ್‌ ಬಜಾರ್’ನಲ್ಲಿ ಇದ್ದದ್ದು. ಒಂದೈವತ್ತು ರೂಪಾಯಿ ವ್ಯಾಪಾರ ಆದರೆ ಅದೇ ದೊಡ್ಡಮೊತ್ತ. ಹಂತಹಂತವಾಗಿ ಗೂಡು ವಿಸ್ತರಣೆಯಾಗುತ್ತಲೇ ಬಂದಿತು. ಎಂಟೂವರೆ ಹೊತ್ತಿಗೆ ಬರುವ ಮಂಜುನಾಥ ಮೋಟಾರ್ಸ್‌ನ ಡಿಂಗ್ಲಾ ಬಸ್ಸು ಬರುವವರೆಗೆ ಬೆಳಗ್ಗಿನ ವ್ಯಾಪಾರ. ನಂತರ ಮಧ್ಯಾಹ್ನದವರೆಗೆ ಅಷ್ಟೋ ಇಷ್ಟೋ. ಹೀಗೇ ಮೋನಣ್ಣನ ದಿನಗಳು ಸಾಗಲಿಲ್ಲ, ಓಡಿದವು. ಹಲವು ಹುಡುಗರು ಮೊನಣ್ಣನ ಮುಂದೆಯೇ ಬೆಳೆದರು. ಕೆಲವರು ಊರು ಬಿಟ್ಟರು. ಏನೇ ಆದರೂ ಮೋನಣ್ಣ ಜಪ್ಪಯ್ಯ ಅನ್ನಲಿಲ್ಲ.
ಅಲ್ಲಿಯೇ ಗೂಡಿನ ಮಧ್ಯೆ ಪುಟ್ಟ ‌ಚಿಮಿಣಿಎಣ್ಣೆಯ ಸ್ಟವ್‌ ಇಟ್ಟು ಚಹಾ ಕಾಯಿಸಲು ಶುರು ಮಾಡಿದರು. ಬಿಸ್ಕಿಟ್‌, ಬನ್ನು ಅಂದಿನ ಫೈವ್‌ ಸ್ಟಾರ್‌ ತಿನಿಸು. ಹೀಗೇ ಬೆಳೆದ ಅಂಗಡಿ ಕ್ರಮೇಣ ನಾಲ್ಕು ಗೋಡೆ, ತಗಡಿನ ಮಾಡು ಕಂಡಿತು. ಅಂಗಡಿಯೊಳಗೆ ಫ್ರಿಡ್ಜ್‌ ಬಂದು ಸೇರಿ ಎಳ್ಳು ಜ್ಯೂಸನ್ನು ತಣ್ಣಗೆ ಮಾಡಿತು. ಬ್ರೆಡ್‌, ಬನ್ನಿನ ಜತೆಗೆ ಪೋಡಿ, ಗೋಳಿಬಜೆ, ಬನ್ಸ್‌ ಎಣ್ಣೆಯಲ್ಲಿ ಈಜಿ ಬಿಸಿಬಿಸಿಯಾಗಿ ಬೀಳತೊಡಗಿದವು. ಇಡ್ಲಿಯೂ ಗ್ರಾಹಕನ ತಟ್ಟೆಯಲ್ಲಿ ಕೂತಿತು. ಗಿರಾಕಿಗಳ ಹೊಟ್ಟೆ ತುಂಬಿತು. ಮೋನಣ್ಣನ ಹೊಟ್ಟೆ ಸ್ವಲ್ಪ ದುಂಡಗಾಯಿತು.
ಆದರೆ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸುತ್ತಲಿನ ಪರಿಸರದಲ್ಲೇ ಇದ್ದು ಬೆಳೆದ ಪರಿ, ಊರಿನ ಅವರ ಸಮಕಾಲೀನ ಯುವಕರನ್ನು ನಾಚಿಸುವಂತಿದೆ. ಅದೇ ಅವಧಿಯಲ್ಲಿ ಸಣ್ಣ ವ್ಯಾಪಾರ ಆರಂಭಿಸಿದ ಅನೇಕರು ಅಂಗಡಿ ತೆರೆದು ಅರ್ಧದಲ್ಲಿ ಮುಚ್ಚಿದವರಿದ್ದಾರೆ. ಊರುಬಿಟ್ಟು ಹೋದವರಿದ್ದಾರೆ. ಅವರ ಸಹೋದರರೇ ವ್ಯವಹಾರ ಜಗತ್ತಿನಲ್ಲಿ ಏಗಲಾಗದೇ ಹೋಗಿದ್ದಾರೆ. ಆದರೆ, ಮೋನಣ್ಣ ಛಲ ಬಿಡಲಿಲ್ಲ.
ಹಾಗೆಂದು ಮೋನಣ್ಣನನ್ನು ಸುಮ್ಮನೆ ಬೆಳೆಯಲುಬಿಟ್ಟವರೂ ಇಲ್ಲ. ಪ್ರತಿ ಬಾರಿ ಗ್ರಾಮ ಪಂಚಾಯಿತಿಯ ಆಡಳಿತ ಬದಲಾದಾಗ ಮೊದಲ ಚರ್ಚೆಯೇ ಮೋನಣ್ಣನ ಅಂಗಡಿ ತೆರವುಗೊಳಿಸುವ ಬಗ್ಗೆ. ಹೀಗೆ ಹಲವು ಪ್ರಯತ್ನಗಳು ನಡೆದವು. ಅಂಗಡಿಯಲ್ಲಿ ಹಲವು ಬಾರಿ ಕಳ್ಳತನ ನಡೆಯಿತು. ಅಂಗಡಿಯೊಳಗೇ ಪೆಟ್ಟು ಜಗಳಕ್ಕೂ ಹಲವರು ಬಂದರು. ಮೋನಣ್ಣ ಕ್ಷಣಕಾಆಲ ವಿಚಲಿತರಾದದ್ದು ಬಿಟ್ಟರೆ ಸ್ಥಳಬಿಟ್ಟು ಕದಲಲಿಲ್ಲ.
ಕೊನೆಗೂ ಅವರ ಅಂಗಡಿ ತೆರವು ಮಾಡುವಲ್ಲಿ ಪಂಚಾಯಿತಿ ಯಶಸ್ವಿಯಾಯಿತು. ಆದರೆ, ಮೋನಣ್ಣ ಸೋಲಲಿಲ್ಲ. ಅಂಗಡಿ ಇದ್ದ ಜಾಗದಲ್ಲೇ ಪಂಚಾಯಿತಿಯೇ ಅಂಗಡಿ ಕೋಣೆಯನ್ನೂ ಕಟ್ಟಿಕೊಟ್ಟಿತು. ಅದನ್ನು ಬಾಡಿಗೆಗೆ ಪಡೆದ ಮೋನಣ್ಣ ಪಕ್ಕದಲ್ಲಿಯೇ ಕ್ಯಾಂಟೀನ್‌ಗಾಗಿ ಮಾಡು ವಿಸ್ತರಣೆ ಮಾಡಿ ಇನ್ನೊಂದು ಕೋಣೆ ಕಟ್ಟಿದರು. ಮತ್ತೆ ಚಹಾ ಕುದಿಯಿತು. ಪೋಡಿ, ಗೋಳಿಬಜೆ ಕರಿದರು. ಇಂದಿಗೂ ಅಂಗಡಿಯಲ್ಲಿ ಸ್ವತಃ ದುಡಿಯುತ್ತಾರೆ. ಪತ್ನಿ ಸಾಥ್‌ ನೀಡುತ್ತಾರೆ.
ತಮ್ಮ ವಿರುದ್ಧ ಏನೆಲ್ಲಾ ಮಸಲತ್ತು ಮಾಡಿದವರನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ  ಬಲೇ ಚಾಪರ್ಲೆ ಎಂದು ಕರೆದು ಮಾತನಾಡಿಸುತ್ತಾರೆ ಮೋನಣ್ಣ...

ಮೋನಣ್ಣನಿಗೊಂದು ಸಲಾಮ್‌

ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ




ನಮಸ್ಕಾರ
ಕಡ್ತಲ ಎಂದರೆ ಹಾಗೆಯೇ. ಈ ಊರು ಹೇಗಿತ್ತು ಹೇಗಾಯಿತು? ಅದಕ್ಕೊಂದು ನಾಮಧೇಯ ಹೇಗೆ ಬಂತು ಎಂಬುದು ನಮ್ಮೂರಿನ ಹಣ್ಣು ತಲೆಯವರಿಗೂ, ಬೋಳು ತಲೆಯವರಿಗೂ, ಕೈಯಲ್ಲಿ ಕೋಲು ಹಿಡಿದು ನಡೆಯುವವರಿಗೂ, ಹೋಗಲಿ ಊರ ಶಾನುಭೋಗರಿಗೂ ಇಂದಿಗೂ ಸ್ಪಷ್ಟವಾಗಿ ಹೊಳೆದಿಲ್ಲ. ಕಡ್ತಲ ಎಬ ಹೆಸರಷ್ಟೇ ಇದೆ.
ಕಾರ್ಕಳ ತಾಲ್ಲೂಕಿನ ಅಜೆಕಾರು ಹೋಬಳಿಯ, ಅಜೆಕಾರು ಪೆರ್ಡೂರು ಮಾರ್ಗದಲ್ಲಿ ಕಾಣಸಿಗುವ ಒಂದು ಪುಟ್ಟ ಹಳ್ಳಿ ಕಡ್ತಲ. ಸುಮಾರು ವರ್ಷಗಳ ಹಿಂದೆ ಈ ಊರ ಮಂದಿ ಪೆಟ್ಟು ಜಗಳ, ಹೊಡೆದಾಟ, ಕಡಿದಾಟಗಳಲ್ಲೇ ಬ್ಯುಸಿ ಆಗಿದ್ದರಂತೆ. ಹೀಗೆ ತಲೆಕಡಿಯುವವರ ಊರೇ ಕಡ್ತಲ ಆಯಿತು ಎಂದು ಒಂದೆರಡು ವರ್ಷಗಳ ಹಿಂದೆ ತೀರಿಕೊಂಡ ನಮ್ಮೂರ ಶೆಟ್ರು ಹೇಳಿದ ಬಾಯಿಕಥೆ. ಇದಕ್ಕೆ ಹೋಲಿಕೆ ಇರುವ ಹಲವು ಕಥೆಗಳನ್ನು ಅದೇ ತಲೆಮಾರಿನವರು ಹೇಳಿದರಾದರೂ ಅದನ್ನು ಒಪ್ಪಿಕೊಂಡು ನಮ್ಮೂರಿನ ಪ್ರತಿಷ್ಠೆ, ಘನತೆ, ಇತಿಹಾಸಕ್ಕೆ ಕಳಂಕ ತರಲು ಸುತಾರಾಂ ಇಷ್ಟವಿಲ್ಲ. ಒಂದು ವೇಳೆ ಅಂದಿನವರೆಲ್ಲ ಶೂರರೂ ಧೀರರೂ ಆಗಿದ್ದು ಪೆಟ್ಟಿನವರೇ (ಪೆಟ್ಟು– ಹೊಡೆದಾಟ, ಬಡಿದಾಟ) ಆಗಿದ್ದರೆ ಈಗಿನವರೇಕೆ ‘ಪೆಟ್ಟುಕಮ್ಮಿ’ಗಳಾಗುತ್ತಿದ್ದರು ಎಂಬುದು ನನ್ನ ಮಂಡೆಗೆ ಹೊಳೆದ ಅರ್ಧಸತ್ಯ.
ಹಾ ಅದೂ ಸರಿ ಎಂದೇ ಒಪ್ಪಿಕೊಳ್ಳೋಣ. ಸುಮಾರು 80ರ ದಶಕದಲ್ಲಿ ಪೆಟ್ಟು ಜಗಳ ಸಾಮಾನ್ಯ ವಿಷಯಗಳೇ. ಕೋಳಿ ಅಂಕದಲ್ಲಿ ಪೆಟ್ಟು, ಯಕ್ಷಗಾನಕ್ಕೆ ಹೋದರೆ ಪೆಟ್ಟು, ಹೋಗಲಿ ಬಿಡಿ ಸಿರಿಬೈಲು ಬೊಬ್ಬರ್ಯ ಜಾತ್ರೆಯಲ್ಲೂ ಪೆಟ್ಟು ಜಗಳ... ಹೀಗೆ ಹೇಳುತ್ತಾ ಹೋದರೆ ಸರ್ಕಾರದ ತೊಟ್ಟೆ ಸಾರಾಯಿ ಬಂದ್‌ ಆಗುವವರೆಗೂ ಕಡ್ತಲಕ್ಕೊಂದು ಪೆಟ್ಟು ಗಲಾಟೆಯ ಗಟ್ಟಿಗಾರಿಕೆ ಇದ್ದೇ ಇತ್ತು. ಬಳಿಕ ಅದು ಬಾರ್‌ಗಳಿರುವ ಊರಿಗೆ ಸ್ಥಳಾಂತರವಾಯಿತು ಎಂಬುದು ಬೇರೆ ವಿಚಾರ.
ಈ ಪೆಟ್ಟು ಗಲಾಟೆಯವರು ಅಂದು ಕಾರ್ಕಳದ ಸಬ್‌ ಇನ್‌ಸ್ಪೆಕ್ಟರ್‌ ಕೃಷ್ಣಪ್ಪರಿಂದ ಹಿಡಿದು ಇತ್ತೀಚೆಗೆ ಅಜೆಕಾರು ಠಾಣೆಯ ಇನ್‌ಸ್ಪೆಕ್ಟರ್‌ನ ಪೆಟ್ಟು ತಿಂದವರೇ.
ಈಗ ಕುಡಿದು–ಕುಡಿಯದೆಯೂ ಪೆಟ್ಟು ಗಲಾಟೆ ಮಾಡುವವರ ವಂಶ ಚಿಗುರುತ್ತಲೇ ಇವೆ. ಹಲವರು ಆ ಪರಂಪರೆಯನ್ನು ಮುಂದುವರಿಸಿದರಾದರೂ ಖಾಕಿ ಮಂದಿ ಆಗಾಗ ಗುಟುರು ಹಾಕುವುದರಿಂದ ಸ್ವಲ್ಪ ನಿಯಂತ್ರಣದಲ್ಲಿದೆ.
ಹಾಗಾಗಿ ಕಡ್ತಲ ಹೆಸರಿನ ಬಗ್ಗೆ ಇರುವ ಜಿಜ್ಞಾಸೆ ಸಂಪೂರ್ಣ ಬಗೆಹರಿದಿಲ್ಲವಾದರೂ ಅದಕ್ಕೆ ಋಣಾತ್ಮಕ ವ್ಯಾಖ್ಯಾನ ಕೊಡಲು ಸಿದ್ಧನಿಲ್ಲ.
ಹೀಗೆ ಕಡ್ತಲದಲ್ಲಿ ಹುಟ್ಟಿ ಬೆಳೆದಿದ್ದೇನೆ. ಹಾಗೇ ಬೆಳೆದು ಜೀವನದ 28ನೇ ಮಳೆಗಾಲದವರೆಗೂ ಶರತ್‌ ಹೆಗ್ಡೆಯ ಜತೆಗೆ ಕಡ್ತಲ ಎಂಬ ಹೆಸರೂ ಸೇರಿಕೊಂಡೇ ಇತ್ತು. ಇತ್ತೀಚೆಗೇಕೋ ನನ್ನ ಉದ್ಯೋಗದಾತ ಸಂಸ್ಥೆ ಶರತ್‌ ಹೆಗ್ಡೆಯನ್ನು ಮಾತ್ರ ಸೇರಿಸಿಕೊಂಡು ಕಡ್ತಲವನ್ನು ಕೈಬಿಟ್ಟಿತು. ಒಂಥರಾ ಬಾಲ ಕಟ್‌ ಮಾಡಿದ ಹಾಗೆ  ಆಯ್ತು ಮಾರಾಯ್ರೆ.
ಊರು ಬಿಟ್ಟು ಸುಮಾರು ದಿನ ಆಯ್ತು. ಮನಸ್ಸಿನ್ನೂ ಕಡ್ತಲದಲ್ಲಿಯೇ ಇದೆ. ಕಡ್ತಲದ ಕಥೆಗಳಲ್ಲಿ ಕೆಲವನ್ನು ಹೇಳುತ್ತೇನೆ. ನೀವೂ ಮಾತನಾಡಿ...

ಪ್ರೀತಿಯಿಂದ
ಶರತ್‌ ಹೆಗ್ಡೆ, ಕಡ್ತಲ