Thursday, 8 May 2014

ಗೋಪಾಲಣ್ಣನ ಪುಟ್ಟ ಸೈಕಲ್ ಮೇಲೆ ಕಳೆದ ಬಾಲ್ಯ

ವರು ಗೋಪಾಲಣ್ಣ. ಕಡ್ತಲದಲ್ಲಿ ನನ್ನ ಹಾಗೂ ನನಗಿಂತ ಒಂದು ದಶಕದ ಹಿರಿಯ ತಲೆಮಾರುಗಳು ನೆನಪಿಡಲೇಬೇಕಾದ ನನ್ನೂರಿನ ಜೀವಂತ ಪಾತ್ರ. ನಮ್ಮ ಬಾಲ್ಯಗಳೆಲ್ಲಾ ಗೋಪಾಲಣ್ಣನ ಮುಂದೆಯೇ ಸುಂದರವಾಗಿ ಸಾಗಿವೆ. ಅವರ ಮೋಟು ಸೈಕಲಿನ ಪೆಡಲಿನ ಮೇಲೆ ನಮ್ಮ ಬಾಲ್ಯದ ಪುಟ್ಟ ಹೆಜ್ಜೆಗಳಿವೆ. ಮೊನ್ನೆ ಊರಿಗೆ ಹೋದಾಗ ಗೋಪಾಲಣ್ಣ ಹಾಗೂ ಅವರ ಪುಟ್ಟ ಮೋಟು ಸೈಕಲ್ಲಿನ ಭೇಟಿಯಾಯಿತು.


ಬಾಲ್ಯ ಕಳೆದ ಸೈಕಲ್‍ ಇದು

ಸೈಕಲ್‌ ಇನ್ನೂ ಇದೆ. ವಯಸ್ಸು ಮುಪ್ಪಾಗಿದ್ದರಿಂದ ‘ಮೂಳೆ ಸವೆದು’ ಮೂಲೆ ಸೇರಿದೆ. ಗೋಪಾಲಣ್ಣನ ಬಳಿ ಮೋಟು ಸೈಕಲ್ಲಿನ ಬಗ್ಗೆ ಕೇಳಿದೆ. ‘ಹೋ ನನ್ನ ನೆನಪಿದೆಯಾ ಮಾರಾಯ ನಿನಗೆ?’ ಎಂದು ಕೇಳುತ್ತಾ ಅದು ಗೋಪಾಲಣ್ಣನ ಕೈ ಹಿಡಿದು ಮೆಲ್ಲನೆ ಹೊರ ಬಂದು ಮೈ ಕೊಡವಿ ಅಂಗಡಿ ಮುಂದೆ ನಿಂತಿತು.
ಹೌದು ಮೋಟು ಸೈಕಲ್ಲು ನಮ್ಮ ಬಾಲ್ಯದ ಗೆಳೆಯ. ಅದರ ಹಿಂದೆ ಚೆಂದದ ಬಾಲ್ಯದ ನೆನಪು ಇದೆ. ಅದನ್ನು ಓಡಿಸುವುದೊಂದು ಪ್ರತಿಷ್ಠೆ. ರೋಲ್‌ ಇಲ್ಲದ ಪುಟ್ಟ ಸೈಕಲ್‌ ನಮಗೆ ಸೈಕಲ್‌ ಓಡಿಸುವುದನ್ನು ಹೇಳಿಕೊಟ್ಟ ಐರಾವತ.
ಅಂದು ನಮಗಿದ್ದದ್ದು ಕಡ್ತಲದ ಶಾಲಾ ಮೈದಾನ ಎಂಬ ಇಂಟರ್‌ನ್ಯಾಷನಲ್‌ ಸ್ಟೇಡಿಯಂ!. ಅದಕ್ಕೆ ಆಗ ಆವರಣ ಇರಲಿಲ್ಲ. ಅಲ್ಲಿ ಸೈಕಲ್‌ ಓಡಿಸುವ ಸಂಭ್ರಮವೇ ಬೇರೆ. ಮೊದಲು ತಳ್ಳಿಕೊಂಡು, ಹಿಂದೊಬ್ಬ ಆಧಾರವಾಗಿ ಹಿಡಿದುಕೊಂಡು ನಡೆಯುತ್ತಾ, ಕಾಲಿನಿಂದ ಪೆಡಲ್‌ ತುಳಿಯುತ್ತಾ ಮುಂದೆ ಸಾಗುತ್ತಿದ್ದಂತೆಯೇ ಅಸಾಧ್ಯವಾದದ್ದನ್ನು ಸಾಧಿಸಿದೆವೇನೋ ಎಂಬ ಪ್ರತಿಷ್ಠೆಯ ಸಂಭ್ರಮ. ಆಗಿನ ಕಾಲಕ್ಕೆ ಸೈಕಲ್‌ ಕೂಡಾ ನಮ್ಮ ಪಾಲಿಗೆ ಪ್ರತಿಷ್ಠೆಯೇ. ಈಗಿನವರಿಗೆ ಬೈಕ್‌ ಕೂಡಾ ಕ್ಯಾರೇ ಇಲ್ಲ ಬಿಡಿ.
ಮೋಟು ಸೈಕಲ್ಲು ಏರಿಕೊಂಡು ವೇಗ ಹೆಚ್ಚಿಸಿ ಅಲ್ಲಲ್ಲಿ ಪಲ್ಟಿ ಹೊಡೆದು ಬಿದ್ದಿದ್ದೇವೆ. ಮತ್ತೆ ಸಾವರಿಸಿಕೊಂಡು ಎದ್ದು ಮತ್ತಷ್ಟು ವೇಗವಾಗಿ ಓಡಿಸಿದ್ದೇವೆ. ಕಡ್ತಲ, ಮುಳ್ಕಾಡು, ಎಳ್ಳಾರೆ ಹೀಗೆ ಸುತ್ತಮುತ್ತಲಿನ ಹಳ್ಳಿ ಸುತ್ತಿದ್ದೇವೆ... ಹೀಗೆ ಮೋಟು ಸೈಕಲ್‌ನ ಸವಾರಿಯ ನೆನಪುಗಳು ಒಂದೆರಡಲ್ಲ.
1982–84ರ ಆಸುಪಾಸು ಮೋಟು ಸೈಕಲ್‌ನ ಜನನ ಕಾಲ. ಸುಮಾರು 20 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದೆ. ಪ್ರತಿ ವರ್ಷ ಗೋಪಾಲಣ್ಣ ಬೇರೆ ಸೈಕಲ್‌ಗೆ ಬಳಿಯಲು ತಂದು ಉಳಿದ ಪೈಂಟ್‌ ಬಳಿದುಕೊಂಡು ಲಕಲಕ ಹೊಳೆಯುತ್ತಿತ್ತು. ನಮಗೆ ಅದೇ ಆಕರ್ಷಣೆ. ಗೋಪಾಲಣ್ಣನ ಸೈಕಲ್‌ ಅಂಗಡಿ ಎಂಬ ಪ್ರಯೋಗ ಶಾಲೆ ನಮ್ಮ ಕುತೂಹಲದ ಕೇಂದ್ರ. ಎಷ್ಟೇ ಹಳೆಯ ಗುಜಿರಿ ಸೈಕಲ್‌ ಇದ್ದರೂ ಅದನ್ನೂ ಪೂರ್ತಿ ಕಿತ್ತುಹಾಕಿ, ಕೆರೆದು ರೆಡ್‌ ಆಕ್ಸೈಡ್ ಕೊಟ್ಟು ಮೇಲೊಂದು ಬಣ್ಣ ಬಳಿದು ಹೊಚ್ಚ ಹೊಸ ಸೈಕಲ್‌ ಸಿದ್ಧಪಡಿಸುತ್ತಾರೆ.

ಬೆಕ್ಕುಗಳ ಸೆಲೂನ್‌!!!

ಸೈಕಲ್‌ಗಳ ಮಡ್‌ ಗಾರ್ಡ್‌ ಮೇಲಿನ ಲೈನಿಂಗ್‌ಗೆ ಬಣ್ಣ ಬಳಿಯುವ ಚೆಂದ ನೋಡಬೇಕು. ಸೈಕಲ್‌ಗಳ ಮಡ್‌ಗಾರ್ಡ್‌ಗಳ ಮೇಲೆ ಗೋಲ್ಡನ್‌ ಲೈನ್‌ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗೋಪಾಲಣ್ಣ ಬಿಡಿಸುತ್ತಾರೆ. ಅವರ ಬಳಿ ಪಾಯಿಂಟ್‌ ಬ್ರಷ್‌ ಇರಲಿಲ್ಲ. ಅಂಗಡಿಯ ಆಸುಪಾಸು ಓಡಾಡುವ ಬೆಕ್ಕುಗಳನ್ನು ಹಿಡಿದು ನಿಧಾನಕ್ಕೆ ಮೀಸೆ ಕತ್ತರಿಸಿಬಿಡುತ್ತಾರೆ. ಅದನ್ನು ನೀಟಾಗಿ ಪುಟ್ಟ ಸೈಕಲ್‌ ಕಡ್ಡಿಗೆ ಕಟ್ಟಿದರೆ ಪಾಯಿಂಟ್‌ ಬ್ರಷ್‌ ರೆಡಿ. ಅಂದು ಪಕ್ಕದಲ್ಲೇ ರಾಘವ ಹೆಗ್ಡೇರ ಮುಳಿಹುಲ್ಲು ಮಾಡಿನ ಹೋಟೆಲ್‌ ಇತ್ತು. ಅಲ್ಲಿಯೂ ಒಂದೆರಡು ಬೆಕ್ಕುಗಳಿದ್ದವು. ಅವುಗಳು ಇತ್ತ ಸುಳಿದಾಡಿದರೆ ಮೀಸೆ ಕಟ್‌ ಗ್ಯಾರಂಟಿ. ಬಹುಶಃ ಮಾರುಕಟ್ಟೆಯಲ್ಲಿ ಸಿಗುವ ಬ್ರಷ್‌ಗಳಿಗಿಂತಲೂ ಚೆಂದದ ಚಿತ್ತಾರ ಬೆಕ್ಕಿನ ಮೀಸೆಯಿಂದ ಮೂಡುತ್ತಿತ್ತು. ಈಗ ಹೋಟೆಲ್ಲೂ ಇಲ್ಲ. ಬೆಕ್ಕುಗಳೂ ಸುಳಿಯುವುದಿಲ್ಲ.
ಇದು ಸೈಕಲ್ಲಿನ ಕಥೆಯಾಯಿತು. ಕಗ್ಗತ್ತಲ ರಾತ್ರಿಯಲ್ಲಿ ತಡವಾಗಿ ಮನೆಗೆ ಸೇರುವವರಿಗೆ, ಕಡ್ತಲದಲ್ಲಿ ನಡೆಯುವ ಹಾಲಾಡಿ, ಮಡಾಮಕ್ಕಿ ಮೇಳಗಳ ಯಕ್ಷಗಾನ ಬಯಲಾಟಕ್ಕೆ ಹೋಗುವವರಿಗೆ ಗೋಪಾಲಣ್ಣನ ಅಂಗಡಿ ಹೊರಗೆ ನೇತುಹಾಕುವ ಹಳೇ ಟೈರುಗಳೇ ದಾರಿದೀಪ. ಅವುಗಳನ್ನು ಒಂದೆರಡು ಅಡಿಗೆ ಕತ್ತರಿಸಿ ಬೆಂಕಿ ಹಚ್ಚಿ ದಾರಿಯುದ್ದಕ್ಕೂ ದೊಂದಿಯೊಂದಿಗೆ ನಡುರಾತ್ರಿ ನಡೆಯುವ ‘ಕೊಳ್ಳಿ ದೆವ್ವ’ಗಳೂ ನಮ್ಮೂರಲ್ಲಿದ್ದವು. ಟೈರಿನ ದೊಂದಿಯ ಪ್ರಖರತೆ, ಕಟು ವಾಸನೆಗೆ ಯಾವ ಕಾಡು ಪ್ರಾಣಿ, ಕೀಟಗಳೂ ಹತ್ತಿರ ಬರಲಾರವು.
ಗೋಪಾಲಣ್ಣನಿಗೆ ನನ್ನದೂ ಸೇರಿದಂತೆ ಹಲವರ ಉಪದ್ರವೂ ಇತ್ತು. ಬಾಡಿಗೆ ಸೈಕಲ್‌ ಪಡೆದು ದಿನಗಟ್ಟಲೆ ಸತಾಯಿಸುವವರು, ಬೇಲಿ, ಪೊದೆಗಳೆಡೆ ಹಾಕಿದವರೂ ಇದ್ದರು. ಹಾ ಅಂದಹಾಗೆ ಗೋಪಾಲಣ್ಣನ ಸೈಕಲ್‌ಗೆ ನಮ್ಮೂರ ರುದ್ರಾಯ ಆಚಾರಿ ಅವರದ್ದು ಮೊದಲ ಬಾಡಿಗೆ ಬೋಣಿ ಅಂತೆ. ಅಂದು ಗಂಟೆಗೆ 50 ಪೈಸೆ ಬಾಡಿಗೆ ಇತ್ತು. ಈಗ ರುದ್ರಾಯ ರಿಕ್ಷಾ ಓಡಿಸುತ್ತಿದ್ದಾರೆ.
ಇನ್ನು ನನ್ನ ಸಮಕಾಲೀನರು ಸೈಕಲ್‌ ತೆಗೆದುಕೊಂಡು ಹೋಗುವುದು. ಎಲ್ಲಿಯೋ ಬೀಳುವುದು. ಕೈಕಾಲಿಗೆ ಗಾಯದ ಜತೆಗೆ ಸೈಕಲ್ಲನ್ನೂ ಬೆಂಡ್‌ ಮಾಡಿ ತರುತ್ತಿದ್ದರು. ಇನ್ನು ಕೆಲವು ಕಿಡಿಗೇಡಿಗಳು ಬೇಕೆಂತಲೇ ವೇಗವಾಗಿ ಓಡಿಸಿ ಥಟ್ಟನೆ ಬ್ರೇಕ್‌ ಹಾಕಿ ಚರ್ರನೆ ಟೈರ್‌ ಸವೆಸುತ್ತಿದ್ದರು. ಇದರಲ್ಲಿ ಗೋಪಾಲಣ್ಣನಿಗೆ ನಷ್ಟ ಉಂಟುಮಾಡಬೇಕು ಎಂಬ ಉದ್ದೇಶ ಹೊರತಾಗಿ ಬೇರೇನೂ ಇಲ್ಲ. ಇಂಥ ಘಟನೆಗಳನ್ನೂ ನೋಡಿದ್ದೇನೆ.
ನಾನೂ ಸೇರಿದಂತೆ ನನ್ನ ಗೆಳೆಯರು ಗೋಪಾಲಣ್ಣನ ಮೋಟು ಸೈಕಲನ್ನು ಕದ್ದೇ ಬಿಡುತ್ತಿದ್ದೆವು. ಪ್ರತಿ ಶನಿವಾರ ಗೋಪಾಲಣ್ಣ ಸೈಕಲ್‌ ಬಿಡಿ ಭಾಗಗಳನ್ನು ತರಲು ಕಾರ್ಕಳಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ 11ರ ಸುಮಾರಿಗೆ ಹೊರಟರೆ ಅವರು ಬರುವುದು ಸಂಜೆಯೇ. ಅಂದು ಹೊಂಚು ಹಾಕಿ ಮೋಟು ಸೈಕಲನ್ನು ಕದ್ದುಬಿಡುತ್ತಿದ್ದೆವು. ಇದು ಗೋಪಾಲಣ್ಣನಿಗೂ ಗೊತ್ತಿತ್ತು. ಅದಕ್ಕೇ ಅವರು ಮೋಟು ಸೈಕಲ್‌ಗೆ ಬೀಗ ಹಾಕುತ್ತಿರಲಿಲ್ಲ. ಹೀಗೆ ಕದ್ದ ಸೈಕಲನ್ನು ಕಡ್ತಲದ ‘ಇಂಟರ್‌ ನ್ಯಾಷನಲ್‌ ಸ್ಟೇಡಿಯಂ’, ಮನೆ ಹತ್ತಿರದ ಪಡ್ಪು, ಗದ್ದೆ, ಗುಡ್ಡೆ ಬಯಲು ಎನ್ನದೇ ಓಡಿಸುತ್ತಿದ್ದೆವು. ಸಂಜೆ ಸುಸ್ತಾದ ಬಳಿಕ ಗೋಪಾಲಣ್ಣ ವಾಪಸಾಗುವ ಮೊದಲು ಅವರ ಅಂಗಡಿ ಮುಂದೆ ಸೈಕಲ್‌ ಇಟ್ಟುಬಿಡುತ್ತಿದ್ದೆವು.
ಹೀಗೆ ಗೋಪಾಲಣ್ಣನ ಸೈಕಲ್‌ನಲ್ಲಿ ಬಾಲ್ಯ ಸವೆಸಿದ ನಾವು ಕೊನೆಗೂ ಅವರ ನಿರಂತರ ಗ್ರಾಹಕರೂ ಆದೆವು. ಹೈಸ್ಕೂಲ್‌ ದಿನಗಳಲ್ಲಿ ಅಪ್ಪ ನನಗೆ ಕೊಡಿಸಿದ್ದ ಅಟ್ಲಾಸ್‌ ಗೋಲ್ಡ್‌ ಲೈನ್‌ ಸೂಪರ್‌ ಎಂಬ 22 ಇಂಚಿನ ಸೈಕಲ್‌ಗೆ ಗೋಪಾಲಣ್ಣನ ಅಂಗಡಿಯೇ ಸರ್ವೀಸ್‌ ಸ್ಟೇಷನ್‌. ವಾರಕ್ಕೊಮ್ಮೆ ಅದಕ್ಕೆ ಏನಾದರೂ ಕಾಯಿಲೆ ಬಂದರೆ ಅಥವಾ ಬರದಿದ್ದರೂ ಗೋಪಾಲಣ್ಣನ ಅಂಗಡಿ ಮುಂದೆ ಹಾಜರಾಗುತ್ತಿದ್ದೆ. ಗೋಪಾಲಣ್ಣ ತರುವ ಚೆಂದದ ಸೀಟು ಕವರ್‌, ರೋಲ್ ಕವರ್‌, ರಿಮ್‌ ಕ್ಲೀನರ್‌, ಬಣ್ಣ ಬಣ್ಣದ ಹಬ್‌ ಬ್ರಷ್‌, ಹ್ಯಾಂಡ್‌ ಕವರ್‌ ಹೀಗೆ ಒಂದಕ್ಕಿಂತ ಒಂದು ಚೆಂದದ ಆ್ಯಕ್ಸೆಸರಿಗಳನ್ನು ನೋಡುವುದು, ಕಿಣಿ ಕಿಣಿ, ಟ್ರಿಂಗ್‌ ಟ್ರಿಂಗ್‌ ಸದ್ದಿನ ಬೆಲ್‌ಗಳನ್ನು ಮುಟ್ಟಿ ಖುಷಿ ಪಡುವುದೇ ಕೆಲಸ. ದುಡ್ಡಿದ್ದರೆ ನನ್ನ ಸೈಕಲ್‌ಗೂ ಹಾಕಿ ಎನ್ನುವುದು, ಅದೇನೂ ಇದೇನು ಎಂದು ಕೇಳುತ್ತಾ ಕಾಡುವುದು... ಹೀಗೆ ಗೋಪಾಲಣ್ಣನಿಗೆ ನಾನು ಕಾಟ ಕೊಟ್ಟದ್ದು, ನನ್ನ ಎಲ್ಲ ಕುತೂಹಲಗಳಿಗೆ ಅವರು ಯಾವತ್ತೂ ಬೇಸರಿಸದೇ ಉತ್ತರಿಸಿದ್ದು ನಿತ್ಯ ನೆನಪು. ಅರ್ಜೆಂಟಿಗೆ ಸ್ಕ್ರೂಡ್ರೈವರ್‌, ಕಟ್ಟಿಂಗ್‌ ಪ್ಲೈಯರ್‌, ಸ್ಪಾನರ್‌ಗಳನ್ನೂ ಪಡೆಯುತ್ತಿದ್ದದ್ದೂ ಇತ್ತು.
 ಹೀಗೆ ಗೋಪಾಲಣ್ಣ ಕೇವಲ ಸೈಕಲ್‌ ರಿಪೇರಿಗಷ್ಟೇ ಸೀಮಿತವಾಗಲಿಲ್ಲ. ಫೋಟೋ ಫ್ರೇಮ್‌ ಕಟ್ಟುತ್ತಾರೆ. ಊರಿನ ಗಣೇಶೋತ್ಸವದ ಗಣೇಶನಿಗೆ ಹೂವಿನ ಅಲಂಕಾರ ಮಾಡುತ್ತಾರೆ. ಪುಟ್ಟ ಹುಡುಗರ ಜತೆ ಮಕ್ಕಳಾಗಿ ಬಿಡುತ್ತಾರೆ. ಅವರ ಮುಂದೆ ಬೆಳೆದ ಹುಡುಗರೆಲ್ಲ ಕಾರು ಬೈಕಿನಲ್ಲಿ ಭರ್ರನೆ ಸಾಗುತ್ತಾರೆ. ನಾನೂ ಸೇರಿದಂತೆ ಹಲವರು ಊರು ಬಿಟ್ಟಿದ್ದಾರೆ. ಹಾಗಿದ್ದರೂ ಗೋಪಾಲಣ್ಣ ಬದಲಾಗಿಲ್ಲ. ತಲೆಗೂದಲು ಸ್ವಲ್ಪ ಹಣ್ಣಾಗಿದ್ದು, ಕನ್ನಡಕ ಬಂದದ್ದು ಬಿಟ್ಟರೆ ಅವರ ಮುಗ್ದತೆ ಹಾಗೇ ಇದೆ. ಕೇವಲ ಮರದ ಗೂಡಿನಲ್ಲಿದ್ದ ಅಂಗಡಿ ಒಂದು ಕಟ್ಟಡದ ರೂಪ ಪಡೆದಿದೆ ಅಷ್ಟೆ.
ಇನ್ನು ಗೋಪಾಲಣ್ಣನ ವೈಯಕ್ತಿಕ ವಿಚಾರ ಹೇಳಲೇಬೇಕು.
ಗೋಪಾಲಣ್ಣ ಮೂಲತಃ ಮುನಿಯಾಲಿನವರು. ಓದಿದ್ದು 5ನೇ ಕ್ಲಾಸು. 1977, 78ರ ಅವಧಿಯಲ್ಲಿ ಮುಂಬೈ ಸೇರಿ ಕೆಲಕಾಲ ಪಾನ್‌ಷಾಪ್‌ ನಡೆಸಿದರು. ಯಾಕೋ ತವರು ಸೆಳೆಯಿತು. ವಾಪಸಾದರು. 1979ರ ಅವಧಿಯಲ್ಲಿ ತಮ್ಮ ಭಾವನ ನೆರವಿನಿಂದ ಕಡ್ತಲದಲ್ಲಿ ಪಾನ್‌ ಅಂಗಡಿ ತೆರೆದರು.
ಆ ವೇಳೆಯ ಕಡ್ತಲದ ಚಿತ್ರವನ್ನು ಹೇಳಲೇಬೇಕು. ಅಂದು ಸೂರ್ಯಣ್ಣ ಹೆಗ್ಡೆ ಅವರ ಏಕೈಕ ಪಾನ್‌ ಅಂಗಡಿ ಇತ್ತು. ಅದಿದ್ದದ್ದು ಈಗಿನ ಕೃಷ್ಣಪ್ರಸಾದ ಕಾಂಪ್ಲೆಕ್ಸ್‌ನ ಸ್ಥಳದಲ್ಲಿ. ಶೆಟ್ಟಿಬೆಟ್ಟು ಗೋವಿಂದ ನಾಯಕರ ಮನೆಯಲ್ಲಿ ದಿನಸಿ ಅಂಗಡಿ, ಉಳಿದಂತೆ ಕಡ್ತಲ ಪೂರ್ಣ ಕುಗ್ರಾಮ. ಈ ಅವಧಿಯ ಸರಿಸುಮಾರಿಗೆ ರಾಘವ ಹೆಗ್ಡೇರ ಮುಳಿಮಾಡಿನ ಹೋಟೆಲ್‌ ಎದ್ದುನಿಂತಿತು.
ಜೀವನೋಪಾಯಕ್ಕಾಗಿ ಈಗಿನ ಅಂಗಡಿಯ ಜಾಗದಲ್ಲೇ ಪುಟ್ಟ ಗೂಡು ಹಾಕಿ ಬೀಡಾ ಅಂಗಡಿ ತೆರೆದರು ನಮ್ಮ ಗೋಪಾಲಣ್ಣ. ಮುನಿಯಾಲಿನಿಂದ ಕಡ್ತಲದವರೆಗೆ ಅವರು ನಡೆದೇ ಬರುತ್ತಿದ್ದರಂತೆ. ಅದೂ ಬೆಳಿಗ್ಗೆ ಗದ್ದೆ ಕೆಲಸ ಮುಗಿಸಿ ಬರುವುದು. ಅದಾಗಲೇ ಅಲ್ಪ ಸ್ವಲ್ಪ ಸೈಕಲ್‌ ರಿಪೇರಿ ಮಾಡುತ್ತಿದ್ದರು. ಬಳಿಕ ಉಜಿರೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ಕೆಲಕಾಲ ಸೈಕಲ್‌ ರಿಪೇರಿ ಬಗ್ಗೆ ತರಬೇತಿ ಪಡೆದರು. ಕೊನೆಗೆ ಪಾನ್‌ ಬೀಡಾ ಜತೆ ಸೈಕಲ್‌ ರಿಪೇರಿಯೇ ಬದುಕಿನ ದಾರಿಯಾಯಿತು. ಮದುವೆಯಾದ ಬಳಿಕ 1996ರಿಂದ ಕಡ್ತಲದ ಸಿರಿಬೈಲಿನಲ್ಲಿ ಪುಟ್ಟ ಮನೆ ಕಟ್ಟಿ ಸಂಸಾರ ನಡೆಸುತ್ತಿದ್ದಾರೆ. ಅವರ ಪತ್ನಿ ನಾಟಿ ಚಿಕಿತ್ಸೆ ಬಲ್ಲವರು. ಗಿಡಮೂಲಿಕೆ ಔಷಧಿ ತಯಾರಿಸುತ್ತಾರೆ. ಹೀಗೆ ಗೋಪಾಲಣ್ಣನದ್ದು ಪುಟ್ಟ ಚೆಂದದ ಸಂಸಾರ.
ಗೋಪಾಲಣ್ಣ ಹೇಳುತ್ತಾರೆ, ‘ಈಗ ಸೈಕಲ್‌ ಅಂದರೆ ದೊಡ್ಡವರಿಗೆ ಅಲರ್ಜಿಯಾಗಿಬಿಟ್ಟಿದೆ. ಸರ್ಕಾರ ಶಾಲೆಗಳಿಗೆ ಸೈಕಲ್‌ ವಿತರಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಮಕ್ಕಳು ಬೈಸಿಕಲ್‌ ಜೋಡಿಸಲು ಅಥವಾ ರಿಪೇರಿ ಮಾಡಿಸಲು ಬರುತ್ತಾರೆ. ಹೀಗಾಗಿ ಜೀವನಕ್ಕೆ ಪರ್ವಾಗಿಲ್ಲ’ ಎನ್ನುತ್ತಾರೆ.
1979–-80ರ ಆಸುಪಾಸಿನಲ್ಲಿ ನನ್ನ ಅಪ್ಪ ಸಹಿತ ಒಟ್ಟು ಆರು ಮಂದಿ ಬಳಿ ಸೈಕಲ್‌ ಇದ್ದವು. ಶೆಟ್ಟಿಬೆಟ್ಟು ಗೋವಿಂದ ನಾಯಕ್‌, ಸುಬ್ರಾಯ ನಾಯಕ್‌, ದೇವೇಂದ್ರ ನಾಯಕ್‌, ಸುಂದರ ಹೆಗ್ಡೆ ಹಾಗೂ ಬೊಬ್ಬರ್ಯ ದೇವಸ್ಥಾನದ ಅರ್ಚಕರಾಗಿದ್ದ ಸುಬ್ರಾಯ ಜೋಯಿಸರು ಅಂದಿನ ಸೈಕಲ್‌ಗಳ ಪ್ರತಿಷ್ಠಿತ ಮಾಲೀಕರು. ಹಾಗೆಯೇ ಗೋಪಾಲಣ್ಣನ ಖಾಯಂ ಗಿರಾಕಿಗಳೂ ಹೌದು.
ಇಂಥ ಗೋಪಾಲಣ್ಣನ ಅಂಗಡಿಯಲ್ಲಿ ದೇವರ ದಯೆಯಿಂದ ಇದುವರೆಗೆ ಕಳ್ಳತನ ಆಗಿಲ್ಲ. ಆಗುವುದೂ ಬೇಡ. ಅವರ ಆಸುಪಾಸಿನ ಅಂಗಡಿಗಳಲ್ಲೇ ಕಳವು ನಡೆದಿದೆ. ಬೊಬ್ಬರ್ಯ ಅವರ ಅಂಗಡಿ ಕಾದಿದ್ದಾನೆ. ಎಲ್ಲವೂ ಚೆಂದವಾಗಿತ್ತು. ಎರಡು ವರ್ಷಗಳ ಹಿಂದೆ ವಿಶಾಲ್‌ ಬಸ್ಸು ನೆಲ್ಲಿಕಟ್ಟೆಯ ಬಳಿ ಗುಜ್ಜೆಮರಕ್ಕೆ ಡಿಕ್ಕಿ ಹೊಡೆದಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಗೋಪಾಲಣ್ಣ ಎದುರಿನ ಗಾಜು ಒಡೆದು ಗುಜ್ಜೆ ಮರದ ಕೊಂಬೆಗೆ ಸಿಲುಕಿ ಕೆಳಗೆ ಬಿದ್ದಿದ್ದರು.
ಇವರೇ ನಮ್ಮ ಗೋಪಾಲಣ್ಣ
ಕತ್ತು– ಭುಜದ ನಡುವಿನ ಮೂಳೆಗೆ ಪೆಟ್ಟಾಗಿ ಕೆಲಕಾಲ ದುಡಿಮೆಗೆ ಕುತ್ತು ಬಂದಿತ್ತು. ಅದೊಂದು ದುರ್ಘಟನೆ ಬಿಟ್ಟರೆ ಉಳಿದೆಲ್ಲ ಸಂದರ್ಭ ಗೋಪಾಲಣ್ಣನ ಮುಗ್ದತೆ– ಪ್ರಾಮಾಣಿಕತೆಗೆ ಒಲಿದ ದೇವರು ಅವರ ಜತೆಗಿದ್ದ.
ಗೋಪಾಲಣ್ಣನ ಸೈಕಲ್‌ ನೀವೂ ಏರಿದ್ದೀರಾ? ನಿಮ್ಮ ಬಾಲ್ಯವೂ ಅವರ ಸೈಕಲ್‌ ಮೇಲಿತ್ತಾ? ನೆನಪಿದೆಯಾ? ಹಾಗಿದ್ದರೆ ಮಾತನಾಡಿ, ಮೊಬೈಲ್‌: 97316 88804