Friday, 30 October 2015

ಕೊಪ್ಪಳದಲ್ಲೂ ನಡೆಯಬೇಕು ಕಳಸಾ– ಬಂಡೂರಿ ಮಾದರಿ ಹೋರಾಟ

ಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಹೋರಾಟ ರಾಜ್ಯದ ಗಮನಸೆಳೆದಿದೆ. ಗುರಿ ತಲುಪುವವರೆಗೆ ಮುಂದುವರಿಯುತ್ತೇವೆ ಎಂಬುದು ರೈತರ, ಹೋರಾಟಗಾರರ ಛಲ...
– ಅದಕ್ಕೆ ಕೊಪ್ಪಳ ಜಿಲ್ಲೆಯಿಂದಲೂ ಬೆಂಬಲ ವ್ಯಕ್ತವಾಯಿತು. ಹೌದು ಅದು ಅಗತ್ಯ. ಆದರೆ, ಕಳಸಾ ಬಂಡೂರಿ ಮೂರು (ಕರ್ನಾಟಕ– ಗೋವಾ– ಮಹಾರಾಷ್ಟ್ರ) ರಾಜ್ಯಗಳ ನಡುವಿನ ತಕರಾರು, ನ್ಯಾಯಾಧೀಕರಣದ ಮುಂದಿರುವ ತೀರ್ಮಾನ ಇತ್ಯಾದಿ ಕ್ಲಿಷ್ಟ ಸಂಗತಿಗಳನ್ನು ಒಳಗೊಂಡಿದೆ. 
ಕೊಪ್ಪಳದ ಜನ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಪರಿ ಗಮನಿಸಿದಾಗ ಜನ ಮೊದಲು ಇಲ್ಲಿನದೇ ನೀರಾವರಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ಭೂಮಿ ಹಸನಾಗಿಸಿಕೊಳ್ಳಲು ಯಾಕೆ ತೀವ್ರವಾದ ಹೋರಾಟ ಮಾಡಬಾರದು? ಎಂಬ ಪ್ರಶ್ನೆ ಕಾಡುತ್ತದೆ. 
ಕೊಪ್ಪಳದಲ್ಲಿ ಅಂತರರಾಜ್ಯ, ಜಿಲ್ಲಾ ಸಮಸ್ಯೆಗಳು ಇಲ್ಲ. ಹಾಗಿದ್ದರೂ ತುಂಗಭದ್ರಾ ದಂಡೆಯಲ್ಲಿರುವ ಮಂದಿಗೆ ಇನ್ನೂ ಸರಿಯಾಗಿ ನೀರು ಸಿಕ್ಕಿಲ್ಲ. ಇರುವ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಹೇಳುವ ತಾಕತ್ತು ಇಲ್ಲಿನ ಜನರಿಗೆ ಬರಬೇಕಿದೆ.  
ದಶಕದಿಂದ ಜನರ ಮೂಗಿಗೆ ತುಪ್ಪ ಹಚ್ಚುತ್ತಲೇ ಬಂದಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ 2015ರ ಒಳಗಾದರೂ ಕೊಪ್ಪಳ – ಯಲಬುರ್ಗಾ ತಾಲ್ಲೂಕಿಗೆ ನೀರು ಹರಿಸೀತು ಎಂಬ ನಿರೀಕ್ಷೆ ಇತ್ತು. ಅದು ಸಚಿವರು, ಬೆಂಬಲಿಗರು ಕಾಮಗಾರಿ ಪರಿಶೀಲಿಸಿ ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳಲಿಕ್ಕಷ್ಟೇ ಸೀಮಿತವಾಯಿತು. 
 ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-–3 ರ ಅಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಹಾಗೂ ಗಂಗಾವತಿ ತಾಲ್ಲೂಕಿನ ಕನಕಗಿರಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಕಾಮಗಾರಿಯೂ ಇತ್ತೀಚೆಗೆ ನಿಧಾನಗತಿಯಲ್ಲಿದೆ. ಈ ಯೋಜನೆಯಡಿ 12.815 ಟಿಎಂಸಿ ನೀರನ್ನು ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿ 2.85 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರು ಪೂರೈಸುವ ಯೋಜನೆಯಿದೆ. ಆದರೆ, ಕುಷ್ಟಗಿ, ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಕಾಮಗಾರಿಗೆ ಸಮೀಕ್ಷೆ ಆಗಬೇಕಿತ್ತು. ಅದಿನ್ನೂ ಸರಿಯಾಗಿ ಆಗಿಲ್ಲ ಎಂಬುದು ಜನರ ತಕರಾರು. 
ಒಟ್ಟಾರೆ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ನಾಲ್ಕು ವರ್ಷದೊಳಗೆ ಪೂರ್ಣಗೊಳಿಸುವ ಭರವಸೆಯಷ್ಟೇ ಸಿಕ್ಕಿದೆ. ಅದಾಗಲೇ ಒಂದೂವರೆ ವರ್ಷ ಕಳೆದುಹೋಗಿದೆ.  
  ಇನ್ನು ಕೊಪ್ಪಳ ತಾಲ್ಲೂಕೊಂದರಲ್ಲೇ ಇರುವ 12 ಏತನೀರಾವರಿ ಯೋಜನೆಗಳ ಸ್ಥಿತಿಗತಿ ದೇವರಿಗೇ ಪ್ರೀತಿ. ಇವುಗಳ ಪೈಕಿ ಒಂದೆರಡು ಮಾತ್ರ ಚಾಲನೆಯಲ್ಲಿವೆ.
ಸಣ್ಣ ನೀರಾವರಿ ಸಚಿವರ ತವರು ಜಿಲ್ಲೆಯಲ್ಲೇ 112 ಕೆರೆಗಳಿವೆ. ಅವುಗಳಲ್ಲಿ 2014ರಲ್ಲಿ ಕೇವಲ 30 ಕೆರೆಗಳು ತುಂಬಿದ್ದವು. ಬೆರಳೆಣಿಕೆಯ ಕೆರೆಗಳ ಹೂಳು ಅಷ್ಟಿಷ್ಟು ತೆಗೆಯಲಾಗಿದೆ. ಉಳಿದ ಕೆರೆಗಳು ‘ಹೂಳು ತೆಗೆಸಿಕೊಂಡು’ ಗುತ್ತಿಗೆದಾರರ ಜೇಬು ತುಂಬಿವೆ. ಕುಷ್ಟಗಿ ತಾಲ್ಲೂಕಿನ ನೀಡಸೇಸಿ ಕೆರೆ ಒತ್ತುವರಿಗೆ ಒಳಗಾಗಿದೆ. ಹನುಮಸಾಗರ ಸಮೀಪದ ಸುಮಾರು ಸಾವಿರ ಎಕರೆಗೂ ಅಧಿಕ ವಿಸ್ತಾರದ ಕಡೂರು ಕೆರೆ ಗ್ರಾನೈಟ್‌ ತ್ಯಾಜ್ಯ ಸಂಗ್ರಹಕ್ಕೆ ಬಲಿಯಾಗಿದೆ. ಕನಕನಾಲಾ ಯೋಜನೆ, ಪುರ ಯೋಜನೆ ಕಾಗದದಲ್ಲಷ್ಟೇ ಉಳಿದಿವೆ. ಸಾಲದ್ದಕ್ಕೆ ಪ್ರವಾಹ ಹರಿವು ಕಾಲುವೆ, ಇನ್ನೊಂದು, ಮತ್ತೊಂದು ಹೆಸರಿನ ಯೋಜನೆಗಳು ಪ್ರಕಟವಾಗುತ್ತಲೇ ಇವೆ. ಇಲ್ಲಿ ಸಾಧಾರಣ ಮಳೆಯಾದರೂ ಕೆರೆಗಳ ದಂಡೆ ಒಡೆಯುತ್ತವೆ. ಏಕೆ ಎಂದು ನೋಡಿದರೆ ಸರಿಯಾಗಿ ಹೂಳು ತೆಗೆದು ದುರಸ್ತಿ ಮಾಡಿರುವುದಿಲ್ಲ. ಕೆರೆಯೊಳಗೆ ಸರಿಯಾಗಿ ಸಂಗ್ರಹವಾದ ನೀರು ಹೊರ ಹರಿಯುವ ಪ್ರಶ್ನೆಯೇ ಇಲ್ಲ.
ಜಿಲ್ಲೆಯ ಜನ ಹೊಸದೇನನ್ನೂ ಕೇಳುತ್ತಿಲ್ಲ. ಇರುವುದನ್ನು ಸರಿಯಾಗಿ, ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಎಂದಷ್ಟೇ ಕೇಳುತ್ತಿದ್ದಾರೆ. ಆದರೆ, ಇವು ಸಭೆ, ಸಮಾರಂಭ, ವಿಚಾರಗೋಷ್ಠಿಗಳಲ್ಲಿ ಭಾಷಣಕ್ಕಷ್ಟೇ ಸೀಮಿತವಾಗುತ್ತಿವೆ. ಪ್ರಶ್ನಿಸಬೇಕಾದವರು ಪ್ರಶ್ನಿಸುತ್ತಿಲ್ಲ. ಅಥವಾ ಇಂಥದ್ದನ್ನು ಇಂಥವರ ಬಳಿ ಪ್ರಶ್ನಿಸಬೇಕು ಎಂಬ ದಾರ್ಷ್ಟ್ಯತನವೂ ಇಲ್ಲಿನ ಜನರಿಗಿಲ್ಲ. ಸ್ಪಂದಿಸಬೇಕಾದವರು ಗೊತ್ತಿದ್ದೂ ಜಾಣ ಮೌನಿಯಾಗಿದ್ದಾರೆ. ಒಂದೊಮ್ಮೆ ಪ್ರಶ್ನಿಸಿದರೂ ಭರವಸೆ ನೀಡಿ ಬಾಯಿ ಮುಚ್ಚಿಸುವ ಕೌಶಲ ಜನಪ್ರತಿನಿಧಿಗಳಿಗೆ ಹೊಸದೇನೂ ಅಲ್ಲ. ಗ್ರಾಮೀಣ ಪ್ರದೇಶದ ಜನರಂತೂ ತಮ್ಮೂರ ದೇವರಿಗೆ ಗುಡಿ ಗುಂಡಾರ ನಿರ್ಮಿಸಿದರೆ ಸಾಕು ಎಂದುಕೊಂಡು ತೆಪ್ಪಗಿರುತ್ತಾರೆ. ಪ್ರಶ್ನಿಸುವವರಾದರೂ ಯಾರು? ಒಂದೋ ಅವರ ಬೆಂಬಲಿಗರು, ಇವರ ವಿರೋಧಿಗಳು... ಇವರಿಬ್ಬರೂ ಪ್ರಶ್ನಿಸುವ ಕೆಲಸ ಮಾಡುವುದಿಲ್ಲ. ಸಂದರ್ಭಾನುಸಾರ ಕೆಸರೆರಚಾಟ ನಡೆಸುತ್ತಾರೆ ಅಷ್ಟೆ. ತಮ್ಮದೇ ಭೂಮಿ ಹಸಿರಾಗಿಸಲು ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಲು ರೈತರೇ ಅಡ್ಡಗಾಲಾಗಿರುವುದೂ ಇನ್ನೊಂದು ವೈರುಧ್ಯ. 
ಮೇಲಿನ ಎಲ್ಲ ಯೋಜನೆಗಳಿಗೆ ನೀರಿನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ಷರಶಃ ನೀರುಪಾಲಾಗಿದೆ. 
ಈ ಮಧ್ಯೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ಹೆಸರಿನ ಶಂಕುಸ್ಥಾಪನೆ, ಚಾಲನಾ ಸಮಾರಂಭ ಎಂಬ ನಾಟಕಗಳಿಗೆ ಲಕ್ಷಾಂತರ ರೂಪಾಯಿ ಪೋಲಾಗಿದೆ.
ಕಳಸಾ– ಬಂಡೂರಿ, ಗದಗದಲ್ಲಿ ಪೋಸ್ಕೋ ಕಂಪೆನಿ ವಿರುದ್ಧ, ದಾವಣಗೆರೆ ಭಾಗದಲ್ಲಿ ರೈತ ಹೋರಾಟಗಳನ್ನು ಗಮನಿಸಿದಾಗ ಆ ಹೋರಾಟಕ್ಕೆ ಮಠಾಧೀಶರು ಚಾಲನಾ ಶಕ್ತಿಯಾಗಿದ್ದರು ಎಂಬುದು ಗಮನಾರ್ಹ. ಅವರಿಂದಲಾದರೂ ಇಲ್ಲಿಯೂ ಹೋರಾಟಕ್ಕೆ ಚಾಲನೆ ಸಿಗಬೇಕು. ಇಲ್ಲಿ ಇಡೀ ಜಿಲ್ಲೆಗೆ ಯಜಮಾನನ ಸ್ಥಾನದಲ್ಲಿರುವ ಇಲ್ಲಿನ ಪ್ರಭಾವಿ ಮಠಾಧೀಶರು ಜನಪರ ಹೋರಾಟಕ್ಕೆ ಮನಸ್ಸು ಮಾಡಬೇಕು ಎಂಬುದು ಜನರ ಬಹುಕಾಲದ ಬೇಡಿಕೆ. ಆದರೆ, ಹೈ–ಕ ಮೀಸಲಾತಿ ಸಂಬಂಧಿಸಿದಂತೆ ಸಂವಿಧಾನದ ಕಲಂ – 371(ಜೆ) ಅನುಷ್ಠಾನದ ಹೋರಾಟಕ್ಕೆ ಮಠಾಧೀಶರನ್ನು ಒತ್ತಾಯದಿಂದ ಕರೆತರಬೇಕಾಯಿತು ಎಂದು ಈ ಭಾಗದ ಹೋರಾಟಗಾರರು ಸ್ಮರಿಸುತ್ತಾರೆ. 
ತಮ್ಮ ಭೂಮಿ ಹಸನಾದರೆ ಮಠದ ಭಂಡಾರ ಇನ್ನಷ್ಟು ಸಮೃದ್ಧಗೊಳಿಸುತ್ತೇವೆ ಎಂಬ ಚಿಂತನೆ ಭಕ್ತರದ್ದು. ಹೀಗಾದಾಗ ಮಠ ಮತ್ತು ಭಕ್ತರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ಭಕ್ತರ ಮನದಾಳ.
ಜನ ಮೌನವಾಗಿರಬೇಕು ಎಂದು ಬಯಸುವ ಜನಪ್ರತಿನಿಧಿಗಳು, ತಾತ್ಕಾಲಿಕ ತೃಪ್ತಿಗಳಲ್ಲೇ ಸುಮ್ಮನಾಗುವ ಜನರು. ಮನೋಭಾವ ಬದಲಾಗದ ವಾತಾವರಣ. ಇದೇ ರೀತಿಯ ವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂದುವರಿಯುವ ತಂತ್ರಗಾರಿಕೆ ಇರುವಷ್ಟು ಕಾಲ ಇಲ್ಲಿಗೆ ಹಿಂದುಳಿದ, ಬರಪೀಡಿತ ಪ್ರದೇಶ, ದಾರಿದ್ರ್ಯ ಎಂಬುದು ಶಾಶ್ವತ ಹಣೆಪಟ್ಟಿ. ಅದೂ ಇಲ್ಲಿನವರ ಶಾಶ್ವತ ಬಂಡವಾಳವಾಗುತ್ತಿರುವುದೂ ಇನ್ನೊಂದು ವಿಪರ್ಯಾಸ. 
                                                                                                                 ಪ್ರೀತಿಯಿಂದ
                                                                                                                            –ಶರತ್‌ ಹೆಗ್ಡೆ ಕಡ್ತಲ



Tuesday, 16 June 2015

‘ಅಶೋಕ ಸರ್ಕಲ್‌’ನಲ್ಲೊಂದು ಸುಂದರ ಆಘಾತ



ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಚಾಲನೆ, ಆಶೀರ್ವಚನ

ಒಂದು ಸುಂದರವಾದ ಆಘಾತ (Pleasant Shock) ಅನುಭವಿಸಿದ್ದನ್ನು ಹಂಚಿಕೊಳ್ಳಲೇಬೇಕು ಅನಿಸುತ್ತಿದೆ.
ನನ್ನ ಸಾಂಸ್ಕೃತಿಕ ಲೋಕ ಮುಗಿದೇ ಹೋಯಿತು. ಸುದ್ದಿ ಜಗತ್ತಿನೊಳಗಷ್ಟೇ ಪರಿಭ್ರಮಣೆ ಎಂದೇ ಭಾವಿಸಿ ಹತಾಶನಾಗಿದ್ದೆ. ಹೌದು ಹೊಟ್ಟೆಪಾಡಿನ ನೌಕರಿಯೊಳಗೇ ಗಿರಕಿ ಹೊಡೆಯುತಿದ್ದೆ. ಹಾಗೆಂದು ಒಳಗಿನ ತುಡಿತ ಸುಮ್ಮನಿರಲಿಲ್ಲ. ಆಗಾಗ ಕುಟುಕುತ್ತಲೇ ಇತ್ತು. ಏನೋ ಒಂದಿಷ್ಟು ಬರೆಸಿತು. ಬರೆದಿದ್ದು ಬೆಳಕಿಗೆ ಬರುತ್ತದೆ ಎಂಬ ಸಣ್ಣ ಆಸೆ, ಕನಸೂ ಕೂಡಾ ಇರಲಿಲ್ಲ. ಕೊನೆಗೂ ಅದು ಬೆಳಕಿಗೆ ಬಂದದ್ದು, ಒಂದಿಷ್ಟು ಜನ ಅದರೊಂದಿಗೆ ಬೆರೆತದ್ದು  ಆಡಿದ್ದು, ಕುಣಿದದ್ದು ನನಗೇ ನಂಬಲಾಗುತ್ತಿಲ್ಲ... ಹೌದು ಇದು ನನ್ನ ಪಾಲಿಗೆ Pleasant Shock. ಜೀವನದಲ್ಲಿ ಮರೆಯುವುದಿಲ್ಲ.
‘ಅಶೋಕ ಸರ್ಕಲ್‌’ ನಾಟಕ ಜೂನ್ 13, 14ರಂದು ಎರಡು ದಿನಗಳ ಕಾಲ ಕೊಪ್ಪಳದ ಸಾಹಿತ್ಯ ಭವನದಲ್ಲಿ ಅದ್ಭುತವಾಗಿ ಪ್ರದರ್ಶನಗೊಂಡಿತು. ನಾನು ಬರೆದ ಕಾರಣಕ್ಕೆ ಅದ್ಭುತ ಎಂದು ಹೇಳಿದರೆ ಅದು ಸ್ವಪ್ರಶಂಸೆ ಮತ್ತು ಅಹಂಕಾರವೆನಿಸುತ್ತದೆ. ಇಲ್ಲಿ ಆಡಿದವರು, ಅದಕ್ಕೊಂದು ರೂಪಕೊಟ್ಟು ಅರಳಿಸಿದವರ ಕುಸುರಿಯಿಂದ ಅದು ಮೂಡಿ ಬಂದಿದೆ. ಆ ಕಾರಣಕ್ಕೆ ಅದು ಅದ್ಭುತ ಎಂದು ವಿಶ್ವಾಸದಿಂದ ಹೇಳುತ್ತೇನೆ.
ಹಿರಿಯ ಗೆಳೆಯ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್‌ ನಾಟಕವನ್ನು ಅರಳಿಸಿದರು. ಮಾತ್ರವಲ್ಲ ಕೊಪ್ಪಳದ ಎಲ್ಲೋ ಮೂಲೆಯಲ್ಲಿದ್ದ
, ಕಮರುತ್ತಿದ್ದವೇನೋ ಎಂದು ಭಾವಿಸಿದ್ದ ಪ್ರತಿಭೆಗಳನ್ನೆಲ್ಲಾ ತಂದು ಜೋಡಿಸಿ ತಂಡ ಕಟ್ಟಿದರು. ಹಾಲ್ಕುರಿಕೆ ಥಿಯೇಟರ್‌ ಬ್ಯಾನರ್‌ ಅಡಿ ಕೊಪ್ಪಳದ ‘ಅಶೋಕ ಸರ್ಕಲ್‌’ ಯಥಾವತ್ತಾಗಿ ರಂಗದ ಮೇಲೆ ಬಂದಿತು.
ಒಂದು ರಂಗ ತಂಡ ಕಟ್ಟಬೇಕು ಎಂಬ ಸುಮಾರು 6 ವರ್ಷಗಳ ಕನವರಿಕೆ ಕೊನೆಗೂ ಭಾಗಶಃ ಕೈಗೂಡಿದೆ. ಅದೂ ನಿರ್ದೇಶಕರ ಕಾಳಜಿ ಮತ್ತು ಪ್ರೀತಿಯಿಂದ.

ನನಗಿದು ಆಘಾತ ಏಕೆಂದರೆ...

ತುಳು ಹಾಸ್ಯ ರಂಗಭೂಮಿಯ ಸರಳ ಸೂತ್ರಗಳನ್ನಷ್ಟೇ ನೋಡಿಕೊಂಡು ಬರೆದ ನಾಟಕವಿದು. ಅದೇ ಮಟ್ಟಕ್ಕೆ (ರೆಡಿಮೇಡ್‌ ವಿನ್ಯಾಸ, ಸಂಗೀತ, ಒಂದಿಷ್ಟು ಬೆಳಕು, ಅದ್ದೂರಿತನ, ಮಸಾಲೆಯುಕ್ತ ಮನೋರಂಜನೆ ಕೇಂದ್ರಿತ ಸಂಭಾಷಣೆ, ಒಂದು ಸಾಲಿನ ಗಂಭೀರ ಸಂದೇಶ) ಮಾಡಿದರಾಯಿತು ಅಂದುಕೊಂಡಿದ್ದೆ. ಆದರೆ ಅಷ್ಟು ಸುಲಭವಾಗಿರಲಿಲ್ಲ. ತುಳು ರಂಗಭೂಮಿಯೂ ಸರಳವಲ್ಲ ಎಂಬುದೂ ಗೊತ್ತಿದೆ.
ಇಲ್ಲಿ ನಿರ್ದೇಶಕ ಹಾಲ್ಕುರಿಕೆ ಶಿವಶಂಕರ್‌ ನೀನಾಸಂ ಪದವೀಧರರು. ಪಕ್ಕಾ ವೃತ್ತಿಪರ ಸೃಜನಶೀಲ ನಿರ್ದೇಶಕ. ಮಾತ್ರವಲ್ಲ ನಿರ್ಮಾಪಕ. ಹಾಗಾಗಿಯೇ ಒಟ್ಟಾರೆ ನಾಟಕ ನಿರ್ಮಾಣವನ್ನು ಅವರು production ಎಂದು ಕರೆದರು. ಅಂಥ ಪಕ್ಕಾ ಕಸುಬುಗಾರ ನಟರನ್ನು ರೂಪಿಸಿದ ಪರಿಯೇ ರೋಚಕ. ಎಷ್ಟೋ ಬಾರಿ ನಾನೂ ಭಯಪಟ್ಟಿದ್ದೆ. ಅಂಥವರಿಗೆ ನನ್ನ ಬಾಲಿಶ ಕೃತಿ ಯಾವ ಲೆಕ್ಕ? ಅದನ್ನು ನೀನಾಸಂ ಪದವೀಧರರು ಆಡಿಸಲು ಒಪ್ಪುವುದು ಬಿಡಿ. ಕೃತಿಯನ್ನು ಓದಲು ಮುಂದಾಗುವುದೂ ಅಸಾಧ್ಯ ಎಂಬುದು ನನ್ನ ಗ್ರಹಿಕೆಯಾಗಿತ್ತು. ಆದರೆ, ಶಿವಶಂಕರ್‌ ನನ್ನ ಕಚೇರಿಗೆ ಬಂದು ಕೃತಿ ಪಡೆದು ಓದಿ, ಕೂಡಲೇ ಪ್ರತಿಕ್ರಿಯಿಸಿದ್ದೇ ಆಶ್ಚರ್ಯ ತಂದಿತ್ತು.
* ಈ ಷಾಕ್‌ಗೆ ಇನ್ನೂ ಒಂದು ಕಾರಣವಿದೆ. ತುಳು ರಂಗ ಭೂಮಿಯ ‘ನಿರ್ದೇಶಕರ’ ಬಳಿ ಹೋಗಿ ನನ್ನ ಕೃತಿ ನೀಡಿದಾಗ ಕನಿಷ್ಠ ಪಕ್ಷ ಅದನ್ನು ನೋಡುವ ಸೌಜನ್ಯವನ್ನೂ ತೋರದವರಿದ್ದರು. ಕೇವಲ ಪಾತ್ರಗಳ ಪಟ್ಟಿಯನ್ನು ನೋಡಿಯೇ ಇಷ್ಟೊಂದು ಪಾತ್ರಗಳನ್ನು ಹೊಂದಿಸುವುದೇ ಅಸಾಧ್ಯ ಎಂದವರಿದ್ದರು. ಮೂರನೆಯದಾಗಿ ಶರತ್‌ ಬರೆದದ್ದು ಎಂಬ ಕಾರಣಕ್ಕಾಗಿಯೇ ಕೃತಿಯನ್ನು ಮೂಲೆಗುಂಪು ಮಾಡಿದವರೂ ಇದ್ದರು. ನನ್ನ ನೆಲದಲ್ಲಿಯೇ ಈ ರೀತಿ ಆಗಿರಬೇಕಾದರೆ ಗೊತ್ತುಗುರಿ, ಪರಿಚಯ ಇಲ್ಲದ ಊರಿನಲ್ಲಿ ಇದು ಸಾಧ್ಯವೇ? ಎಂಬ ಪ್ರಶ್ನೆ ಕಾಡಿತ್ತು. ಮಾತ್ರವಲ್ಲ ಅಂಥದ್ದೊಂದು ಆಸೆಯನ್ನೂ ಹುಟ್ಟಿಸಿರಲಿಲ್ಲ.
ಗೆಳೆಯರೇ ಕೇವಲ 10 ಪಾತ್ರಗಳ ನಾಟಕವನ್ನು 15 ಮಂದಿಯ ಕೈಯಲ್ಲಿ 20ಕ್ಕೂ ಹೆಚ್ಚು ಪಾತ್ರಗಳನ್ನು ಶಿವಶಂಕರ್‌ ಅರಳಿಸಿದರು.
ಸ್ಕ್ರಿಪ್ಟ್‌ ಕೊಟ್ಟು ಸುಮ್ಮನಿದ್ದರಾಯಿತು ಎಂದುಕೊಂಡವನ ಕೈಯಲ್ಲಿ ನಿರ್ದೇಶಕರು ಮತ್ತಷ್ಟು ಹಾಡು, ಸಂಭಾಷಣೆ ಬರೆಸಿದರು. ತಾಂತ್ರಿಕವಾಗಿ ಶೋಧಿಸಲು ಪ್ರೇರೇಪಿಸಿದರು. ಅಂದುಕೊಳ್ಳದ ಆಲೋಚನೆ, ಕೆಲಸಗಳನ್ನು ಮಾಡಿಸಿದರು. ಇದೂ ನನ್ನಿಂದ ಸಾಧ್ಯವಾಯಿತೇ ಎಂಬ ಪ್ರಶ್ನೆಯನ್ನು ಈಗಲೂ ಕೇಳಿಕೊಳ್ಳುತ್ತೇನೆ.

ಈಗ ಶುರುವಾಯಿತು ಕಟ್ಟುವ ಕ್ರಿಯೆ...

ರಂಗಭೂಮಿ ಎಂದರೆ ಕಟ್ಟುವುದು ಎನ್ನುತ್ತಾರೆ. ನಮ್ಮ ತಂಡದ ವಿಷಯದಲ್ಲಿ ಹಾಗೇ ಆಯಿತು ನೋಡಿ ವಿಷಯ ವಸ್ತು ಕೊಪ್ಪಳದ್ದು. ಬರೆದವನು ಉಡುಪಿ ಜಿಲ್ಲೆಯ ಕಡ್ತಲದವನು. ನಿರ್ದೇಶಿಸಿದವರು ತುಮಕೂರು ಜಿಲ್ಲೆಯ ಹಾಲ್ಕುರಿಕೆಯವರು. ಸಂಗೀತ ಅಳವಡಿಸಿದವರು ಉತ್ತರ ಕನ್ನಡದ ಕುಮಟಾದ ಅರುಣ್‌ ಭಟ್‌. ಅಶೋಕ ಸರ್ಕಲ್‌ ಸೆಟ್‌ ಹಾಗೂ ರಂಗ ವಿನ್ಯಾಸ, ಪರಿಕರ ಮಾಡಿಕೊಟ್ಟವರು ಕಲಬುರ್ಗಿಯ ಸುರೇಶ್‌ ಖೂಲಿ ಮತ್ತು ವಿಠಲ್‌, ಬೆಳಕಿನ ವಿನ್ಯಾಸ ಮಾಡಿದವರು ಕಲಬುರ್ಗಿ, ಧಾರವಾಡ ಹಾಗೂ ಬೆಂಗಳೂರಿನ ಮಧ್ಯೆ ಸುತ್ತು ಹಾಕುತ್ತಿರುವ ಸಾಜಿದ್‌ ಅವರು. ತಾಂತ್ರಿಕ ನೆರವು ನೀಡಿದ್ದು, ಅದ್ದೂರಿ ಪ್ರಚಾರ ಕೊಟ್ಟದ್ದು ಹೊಸಪೇಟೆ (ಬಳ್ಳಾರಿ ಜಿಲ್ಲೆ) ಆಕಾಶವಾಣಿಯವರು. ಒಂದಿಷ್ಟು ಪರದೆ, ರಂಗ ಪರಿಕರ ಕೊಟ್ಟವರೂ ಹೊಸಪೇಟೆಯ ಕನ್ನಡ ಕಲಾ ಸಂಘದವರು. ಆಡಿದವರು ಕೊಪ್ಪಳದ ಅಪ್ಪಟ ಕಲಾವಿದರು. ತಾಂತ್ರಿಕ ವಿಭಾಗದಲ್ಲಿ ಎಲ್ಲರೂ ಆಯಾ ವಿಷಯದಲ್ಲಿ ಶಿಕ್ಷಣ ಪಡೆದವರು.
ಒಟ್ಟಾರೆ ಪ್ರಯೋಗದಲ್ಲಿ ಕರ್ನಾಟಕದ ಬಹುಪಾಲು ಜಿಲ್ಲೆಗಳ ಪ್ರತಿನಿಧಿಗಳು ಒಟ್ಟಾದರು. ಹೇಳಿ ಕಟ್ಟುವುದು ಎಂದರೆ ಇದೇ ಅಲ್ಲವೇ?

ಎಲ್ಲಿದ್ದರು ಕಲಾವಿದರು?

ಅಶೋಕ ಸರ್ಕಲ್‍ನಲ್ಲಿ ಒಂದು ಎಳೆಯ ಪ್ರೇಮ ಪ್ರಸಂಗ
ಎಲ್ಲೆಲ್ಲೋ, ಯಾರ್ಯಾರೊಳಗೋ ಅಡಗಿದ್ದರು. ಶಿವಶಂಕರ್‌ ಹೊರಗೆಳೆದರು. ನಮ್ಮ ತಂಡದಲ್ಲಿ ಸಮಾಜದ ಕೆಳಸ್ತರದಿಂದ ಹಿಡಿದು, ನಾಲ್ಕಕ್ಷರ ಓದಿದ ನೌಕರರವರೆಗೂ ಇದ್ದರು. ಕಮ್ಮಾರ ವೃತ್ತಿಯ ವೀರು ಸಿಂಗ್‌, ತರಕಾರಿ ಮಾರುವ ಹುಡುಗ, ಕೂಲಿ ಕಾರ್ಮಿಕ, ಅಕ್ಷರ ಬಾರದವರು, ಸರ್ಕಾರಿ ನೌಕರರು, ಪತ್ರಕರ್ತರು, ವಿದ್ಯಾರ್ಥಿಗಳು....
ಎಲ್ಲರೂ ರಂಗದ ಮೇಲೆ ಒಂದೇ. ಪ್ರದರ್ಶನ ಮುಗಿಯುವ ವೇಳೆಗೆ ನಾವೆಲ್ಲರೂ ಒಂದೇ ಮನೆಯ ಸದಸ್ಯರಾಗಿದ್ದೆವು. ತಂಡದಲ್ಲಿದ್ದ ಏಕೈಕ ಹೆಣ್ಣುಮಗಳು ಗಂಗಾ. ಎಲ್ಲರ ಪಾಲಿಗೆ ಪ್ರೀತಿಯ ಮಗಳು, ತಂಗಿ ಆಗಿಬಿಟ್ಟಿದ್ದಳು. ಎಲ್ಲ ಕೀಳರಿಮೆ, ಅಭಿಪ್ರಾಯಬೇಧ,  ಗೊಂದಲ, ಅಳುಕು ನಿವಾರಣೆಯಾಗಿ ಹೊಸ ಜಗತ್ತಿಗೆ ಪದಾರ್ಪಣೆ ಮಾಡಿದ್ದೆವು.
ನಾಟಕಕ್ಕೆ ಬಂದದ್ದು ಸೀಮಿತ ಸಂಖ್ಯೆಯ ಜನ. ಆದರೆ, ಯಾರನ್ನು ಯಾವ ಸಂದೇಶ ತಲುಪಬೇಕೋ ಅದೆಲ್ಲವೂ ಯಶಸ್ವಿಯಾಗಿ ತಲುಪಿದೆ. ಮುಂದೆಯೂ ತಲುಪುತ್ತದೆ. ಪ್ರಯೋಗ ಇಲ್ಲಿಗೇ ನಿಲ್ಲುವುದಿಲ್ಲ. ಮುಂದುವರಿಯುತ್ತಲೇ ಇರುತ್ತದೆ ಎಂಬುದು ನಿರ್ದೇಶಕರ ಹಾಗೂ ಕಲಾವಿದರ ಆತ್ಮವಿಶ್ವಾಸ. ಈ ಗೆಳೆಯರು ಇನ್ನಷ್ಟು ಬಲಗೊಳ್ಳಬೇಕು. ತಂಡ ಇನ್ನೂ ದೊಡ್ಡದಾಗಬೇಕು. ಅದು ‘ಅಶೋಕ ಸರ್ಕಲ್‌’  ತಂಡವೇ ಆಗಬೇಕು ಎಂಬುದು ನನ್ನ ಸ್ವಾರ್ಥ. ಕೊಪ್ಪಳದಲ್ಲಿ ಬಲವಾದ ರಂಗ ಪ್ರೀತಿ ಬೆಳೆಯಬೇಕು. ಇಲ್ಲಿ ಬೇಕಿರುವುದು ಸದಭಿರುಚಿಯ ಸಹೃದಯಿ ಪ್ರೇಕ್ಷಕರು. ಇನ್ನು ಅವರನ್ನು ರಂಗಮಂದಿರಕ್ಕೆ ಕರೆತರಬೇಕಿದೆ.

ಕೈಜೋಡಿಸಿದ ರಂಗಹೃದಯಿಗಳನ್ನು ನೆನೆಯಲೇಬೇಕು

ವಕೀಲರ ಸಂಘ, ಶಿಕ್ಷಕರು, ಉಪನ್ಯಾಸಕರು, ಉದ್ಯಮಿಗಳು, ಸಂಘ ಸಂಸ್ಥೆಗಳ ಬಂಧುಗಳು, ವೃತ್ತಿ ಬಾಂಧವರಾದ ಮಾಧ್ಯಮದವರು... ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.
ಇವರು ಕೇವಲ ದುಡ್ಡುಕೊಟ್ಟದ್ದಷ್ಟೇ ಅಲ್ಲ. ವೇದಿಕೆ, ಬೆಳಕು, ಮೈಕ್‌, ಮೇಕಪ್ ಎಲ್ಲದರ ಅಚ್ಚುಕಟ್ಟುತನ ಮೂಡುವಲ್ಲಿ ಕಣ್ಣಾಗಿ ನಿಂತಿದ್ದರು.
ಜನರನ್ನು ನಗಿಸಿದ್ದೇವೆ. ತುಂಟತನದ ಮೂಲಕ ಒಂದಿಷ್ಟು ಚಿಂತನೆಯ ಹುಳಬಿಟ್ಟಿದ್ದೇವೆ. ಅದು ಹರಿದಾಡುತ್ತಲೇ ಇರಲಿ. ಕೇವಲ ಸಂತೋಷವನ್ನು ಹಂಚಿಕೊಳ್ಳುವುದಷ್ಟೇ ಈಗಿನ ಕೆಲಸ. ಉಳಿದದ್ದು ನಮ್ಮೊಳಗೇ ಇದೆ. ಅದು ಅಲ್ಲಿಯೇ ಇರಲಿ.
                                                           ಪ್ರೀತಿಯಿಂದ 
                                                –ಶರತ್‌ ಹೆಗ್ಡೆ, ಕಡ್ತಲ

Sunday, 11 January 2015

ಅಳಿವಿನಂಚಿನ ಕಂಬಳವೂ ಸಿರಿಬೈಲಿನ ಡ್ರೈರೇಸೂ....

ಶೀರ್ಷಿಕೆ ವಿಚಿತ್ರವೆನಿಸಬಹುದು. ಆದರೂ ಅನಿಸಿದ್ದನ್ನು ಚರ್ಚಿಸುವುದರಲ್ಲಿ ತಪ್ಪಿಲ್ಲ. ನನ್ನ ಚರ್ಚೆ ಏನಿದ್ದರೂ ನಂಬಿದ ಬೊಬ್ಬರ್ಯನ ಬಳಿ ಅಷ್ಟೆ. ಅವನ ಮಧ್ಯವರ್ತಿಗಳು ಏಜೆಂಟರು, ಗುತ್ತಿಗೆದಾರರು ಮೂಗು ತೂರಿಸುವುದು ಬೇಡ.
ಕರಾವಳಿಯ ಕಂಬಳ ಕಾನೂನು ತೂಗುಗತ್ತಿ ಅಡಿ ನಡೆಯುತ್ತಿದೆ. ಒಂದೆಡೆ ನಿಷೇಧಿಸಬೇಕು ಎಂಬ ಧ್ವನಿ. ಇನ್ನೊಂದೆಡೆ ಉಳಿಸಬೇಕು ಎಂಬ ಕೂಗು. ಇರಲಿ, ಕಂಬಳ ಮೂಲ ಸ್ವರೂಪದಲ್ಲಿ ಜೂಜು ಹೊರತಾಗಿ ನಡೆಯಬೇಕು ಎಂಬ ಧ್ವನಿಗೆ ಸಹಮತವಿದೆ. ಉಳಿದಂತೆ ಕಂಬಳದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ನಡೆಯುತ್ತಲೂ ಇವೆ. ಅದರ ಬಗ್ಗೆ ಚರ್ಚಿಸುವಷ್ಟು ಜ್ಞಾನವಾಗಲಿ, ಪರಿಣತಿಯಾಗಲಿ ನನಗಿಲ್ಲ.
ಇಲ್ಲಿ ಹೇಳ ಹೊರಟಿರುವುದು ನಮ್ಮೂರಿನ ದೈವಗಳ ಡ್ರೈ ರೇಸ್‌ ಬಗ್ಗೆ.
ಸಿರಿಬೈಲಿನಲ್ಲಿ ಮಿಡ್‍ನೈಟ್‍ ಡ್ರೈರೇಸ್‍ ನಡೆಯುವ ಗದ್ದೆ
ನಮ್ಮೂರಿನಲ್ಲಿ ಪ್ರತಿ ವರ್ಷ ಜನವರಿ ಆಸುಪಾಸಿನಲ್ಲಿ ಒಂದು ಹುಣ್ಣಿಮೆಯ ದಿನ ಬೊಬ್ಬರ್ಯ ದೇವರ ಜಾತ್ರೆ ನಡೆಯುತ್ತದೆ. ಒಂದು ದಿನ ದೈವಗಳ ಕೋಲವೂ, ಮರುದಿನ ಮಾರಿಹಬ್ಬವೂ ನಡೆಯುತ್ತದೆ. ಕೋಲದ ದಿನ ಮಧ್ಯರಾತ್ರಿ 12ರ ಸುಮಾರಿಗೆ ಕೋಲ ಕಟ್ಟಿದ ದೇವರುಗಳು ಸೀದಾ ಮಾರಿದೇವರ ಗುಡಿ ದಾಟಿ ಇರುವ ಗದ್ದೆ(!?)ಯ ಕಡೆಗೆ ನಡೆಯುತ್ತವೆ. ಡೊಳ್ಳು, ದಿವಟಿಗೆ, ವಾದ್ಯ ಮೇಳಗಳ ಗದ್ದಲ ಅಲ್ಲಿ ಜೋರಾಗಿಯೇ ಇರುತ್ತದೆ. ಇದನ್ನು ದೇವರು ಕೆಳಗಿಳಿಯುವುದು ಅಥವಾ ಕಂಬಳಕ್ಕೆ ತೆರಳುವುದು ಎಂದು ಕರೆಯಲಾಗುತ್ತದೆ.
ಇನ್ನು ಈ ಗದ್ದೆಯೋ ಪೂರ್ಣ ಒಣಗಿದೆ. ಅದರ ಮೇಲೊಂದಿಷ್ಟು ಮಣ್ಣು ಕೊಚ್ಚಿ ಹಾಕಿ ಮಣ್ಣಿನ ಒಣ ಹೆಂಟೆ ರಚನೆ ಮಾಡಲಾಗಿರುತ್ತದೆ. ಇದರ ಮೇಲೆ ಎರಡು ಜೋಡಿ (ಲಭ್ಯತೆಯ ಆಧಾರದ ಮೇಲೆ) ಕೋಣಗಳನ್ನು ಒಂದೆರಡು ಸುತ್ತು ನಡೆಸಲಾಗುತ್ತದೆ. ಇದು ಕಂಬಳವಂತೆ!  ದೈವಗಳು ಅದನ್ನು ವೀಕ್ಷಿಸುವುದಂತೆ. ಕಂಬಳ(!) ಮುಗಿದ ಬಳಿಕ ಒಂದು ಚತುಷ್ಕೋನಾಕೃತಿಯ ಗುರ್ಜಿಯೊಂದನ್ನು ಒಣ ಗದ್ದೆಯ ಮಧ್ಯೆ ಇಡಲಾಗುತ್ತದೆ. ಮುಂದೆ ದೈವ, ಕೋಣಗಳು ಇಡೀ ಜಾತ್ರೆಯ ಆವರಣಕ್ಕೆ ಒಂದು ಸುತ್ತು ಬಂದು ಮತ್ತೆ ಕೋಲದ ಚಪ್ಪರ ಸೇರುತ್ತಾರೆ.
ಈಗ ಬೊಬ್ಬರ್ಯನ ಬಳಿ ದೈವಗಳ ಈ ನಡೆ ಕುರಿತು ಪ್ರಶ್ನೆಗಳು... ಕೇವಲ ಕುತೂಹಲಕ್ಕೆ ಕೇಳುತ್ತಿದ್ದೇನೆ. ಬೇಜಾರು ಮಾಡಿಕೊಳ್ಳಬೇಡ.
* ಕಂಬಳ ಎಂದರೆ ಹೀಗೂ ಉಂಟೇ?
* ಒಣ ಗದ್ದೆ, ಕಳದಲ್ಲಿ ಕೋಣ ಓಡಿಸುತ್ತಾರೆಯೇ? (ಅದೂ ನಿನ್ನ ಕ್ಷೇತ್ರದ ಕಂಬಳದಲ್ಲಿ ಕತ್ತಲೆಯಲ್ಲಿ ಕೋಣಗಳು ಓಡುವುದಾದರೂ ಹೇಗೆ? ಬರೀ ನಡೆಯುತ್ತವೆ.)
* ಅದನ್ನು ದೈವಗಳು ಮಧ್ಯರಾತ್ರಿ ವೀಕ್ಷಿಸುತ್ತವೆಯಲ್ಲಾ. ನಿನ್ನ ಭೌತಿಕ ಅಸ್ತಿತ್ವ ಇದ್ದ ಒಂದಾನೊಂದು ಕಾಲದಲ್ಲಿಯಾದರೂ ( ಬೇಕಿದ್ದರೆ ಸತ್ಯದ ಕಾಲ ಎಂದಿಟ್ಟುಕೋ) ಈ ರೀತಿ ಮಧ್ಯರಾತ್ರಿ ಕಂಬಳ (ಮಿಡ್‌ನೈಟ್‌ ರೇಸ್‌) ನಡೆಯುವುದು ಹಾಗೂ ಅದನ್ನು ನೀನು, ದೈವಗಳು ನೋಡುವುದು ಇತ್ತೇ?
* ಕೃಷಿ ಸಂಸ್ಕೃತಿ ಅದರಲ್ಲೂ ಭತ್ತ ಬೆಳೆಯುವುದು ಹಂತಹಂತವಾಗಿ ನಶಿಸಿರುವ, ಕೋಣಗಳೂ ಮರೆಯಾಗಿರುವ ಊರಿನಲ್ಲಿ ಇದು ಬೂಟಾಟಿಕೆಯ, ಪ್ರತಿಷ್ಠೆಯ, ಅವಾಸ್ತವದ ಪ್ರದರ್ಶನ ಎಂದು ನಿನಗನಿಸುವುದಿಲ್ಲವೇ?
ಹೇಳು ಬೊಬ್ಬರ್ಯ ನಿನ್ನ ಜತೆ ಇನ್ನೂ ಹಲವು ಪ್ರಶ್ನೆಗಳಿವೆ.
ಹಿಂದೆ ನಿನ್ನದೊಂದು ಪುಟ್ಟ ಗುಡಿ ಇತ್ತು. ನಾವೆಲ್ಲಾ ಬಂದು ಕೈಮುಗಿಯುತ್ತಿದ್ದೆವು. ಜನಜಂಗುಳಿ ಇಷ್ಟೊಂದು ಇರಲಿಲ್ಲ. ನೀನೂ ತಣ್ಣಗೆ ಕುಳಿತಿದ್ದೆ. ನಾವೂ ತಣ್ಣಗಿದ್ದೆವು. ಬಳಿಕ ನಿನ್ನ ಹೆಸರಿನಲ್ಲಿ ಒಂದೊಂದೇ ಸಮಸ್ಯೆಗಳು ನಿನ್ನ ಸುತ್ತಮುತ್ತಲಿನವರಿಗೆ ಕಾಣಲಾರಂಭಿಸಿದವು. ಕೊನೆಗೂ ನಿನಗೊಂದು ಸುಸಜ್ಜಿತವಾದ ಕಟ್ಟಡ ಕಟ್ಟಿದರು. ಸಾಲದ್ದಕ್ಕೆ ಒಂದು ಕಾಂಪೌಂಡ್‌ ಬಂದಿತು. ಅದೂ ಸಾಲಲಿಲ್ಲ. ಎರಡು ಕಾಂಪೌಂಡ್‌ ಕಟ್ಟಿ ನಿನ್ನನ್ನು ಅಕ್ಷರಶಃ ಕೋಟೆಯೊಳಗೆ ಬಂಧಿಸಿದೆವು. ಊರು ಕಾಯುವ ನಿನಗೇಕೆ ಕೋಟೆಯ ಹಂಗು ದೇವರೇ?
ಕೊನೆಗೆ ನಿನ್ನನ್ನು  ನಿರ್ವಹಿಸಲು (maintain) ನಮಗೆ ದುಡ್ಡು ಬೇಕಾಯಿತು. ಅದುವರೆಗೆ ನೀನು ಏನನ್ನೂ ಕೇಳಲಿಲ್ಲ. ಇಂದಿಗೂ ಏನನ್ನೂ ಕೇಳುತ್ತಿಲ್ಲ ಎಂಬುದು ನನಗೂ ಗೊತ್ತು. ಕೇವಲ ಗುಡಿಯಿದ್ದ ಕಾಲದಲ್ಲೂ ನೀನು ಭಕ್ತರು ಶಕ್ತ್ಯಾನುಸಾರ ಕೊಟ್ಟದ್ದನ್ನು ಸ್ವೀಕರಿಸಿ ಮಹಾ ವರಪ್ರಸಾದಗಳನ್ನೇ ಕರುಣಿಸಿದ್ದಿ ಎಂದು ನಮ್ಮೂರ ಹಿರಿಯರು ನಿನ್ನ ಕಾರಣಿಕಗಳನ್ನು ಕೊಂಡಾಡುತ್ತಿದ್ದರು. ಈಗ ಮಹಾ ಪೂಜೆಗೆ ಇಂತಿಷ್ಟು, ರಂಗ ಪೂಜೆಗೆ ಇಂತಿಷ್ಟು, ಕರ್ಪೂರಾರತಿ, ಕುಂಕುಮಾರ್ಚನೆಗೆ ಇಂತಿಷ್ಟು, ವಾಹನ ಪೂಜೆ, ಆ ಪೂಜೆ, ಈ ಪೂಜೆಗೆ ಇಂತಿಷ್ಟು ಎಂದು ಹೋಟೆಲ್‌ನ ಮೆನು ಕಾರ್ಡ್‌ ತೂಗು ಹಾಕಿದ ಹಾಗೆ ಬೋರ್ಡ್ ಹಾಕಿಸಿಕೊಂಡೆ. ತಕ್ಕಂತೆ ಬಿಲ್‌ ಕೂಡಾ ಕೊಡುತ್ತಿ ಬಿಡು. ಬೊಬ್ಬರ್ಯ ನೀನೊಂದು ಬ್ರಾಂಡ್‌, ನಿನ್ನ ಹೆಸರಿನ ಉತ್ಪನ್ನಗಳು ಸೇವೆಯ ಹೆಸರಿನಲ್ಲಿ ಭಕ್ತರಿಗೆ ಮಾರಾಟವಾಗುವುದು ಬೇಕಿರಲಿಲ್ಲ ಅಲ್ವಾ?
ನಿನ್ನ ಕ್ಷೇತ್ರದಲ್ಲೇ ಮದುವೆಯಾಗಬೇಕು ಎಂದು ಹರಕೆ ಹೊತ್ತಿದ್ದವರೆಲ್ಲಾ ಈಗ ಬೇರೆಡೆ ಮದುವೆಯಾಗಿ ನಿನ್ನ ಹುಂಡಿಗೊಂದಿಷ್ಟು ದಂಡ ಕಟ್ಟಿ ಹೋಗುತ್ತಿರುವುದೂ ನಿನ್ನ ಗಮನದಲ್ಲಿದೆ ತಾನೆ? ಯಥಾಶಕ್ತ್ಯಾನುಸಾರ ಎಂದು ಇದ್ದದ್ದು ಮೆನು ಕಾರ್ಡ್‌ಗೆ ಬದಲಾದಾಗ ಆಗುವ ಪರಿಸ್ಥಿತಿ ಇದು. ನಿನ್ನ ಮೆನುಕಾರ್ಡ್‌ನ ಬಿಲ್‌ನ್ನು ಸಾಮಾನ್ಯ ಭಕ್ತ ಎಲ್ಲ ಸಂದರ್ಭದಲ್ಲಿಯೂ ಭರಿಸಲು ಶಕ್ತನಾಗಿರುತ್ತಾನೆ ಎನ್ನಲಾಗದು.
ಇಲ್ಲಿ ವ್ಯಾಪಾರಿ ಮನಸ್ಸುಗಳ ಲಾಬಿ ಎಷ್ಟು ಜೋರಾಗಿದೆ. ಅದು ಶ್ರೀಸಾಮಾನ್ಯ ಭಕ್ತನನ್ನು ಹೇಗೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಅರ್ಥಾತ್‌ ಸುಲಿಯುತ್ತಿದೆ ಎಂಬುದು ನಿನ್ನ ಗಮನಕ್ಕೆ ಬಾರದ ವಿಷಯವೇನಲ್ಲ.
ಅಂತೂ ದುಡ್ಡು ಸಂಗ್ರಹವಾಯಿತು. ಅದೂ ಆಗಾಗ ಕಳ್ಳನ ಪಾಲಾದದ್ದೂ ನಡೆಯಿತು. ಇದುವರೆಗೆ ಕಳ್ಳ ಸಿಕ್ಕಿದ ಉದಾಹರಣೆ ಇಲ್ಲ. ಬಹುಶಃ ಕಳ್ಳ ಯಾವುದೋ ಬಹುದೊಡ್ಡ ಸಂಕಟದ ಕಾಲದಲ್ಲಿ ಬಂದು ನಿನ್ನನ್ನು ಬೇಡಿ ಹುಂಡಿಗೆ ಕೈಹಾಕಿದ್ದಿರಬಹುದು. ಸತ್ಯದ ಪರವಾಗಿರುವ ನೀನು ಅವನನ್ನೂ ರಕ್ಷಿಸಿದ್ದಿ ಎಂಬುದು ನನ್ನ ಭಾವನೆ.
ಮುಂದೆ ಈ ಕಳ್ಳರ ಪತ್ತೆಗೆ ಸಿಸಿ ಕ್ಯಾಮೆರಾ ಹಾಕುತ್ತಾರೆ. ಭಕ್ತರು ಬರುವುದು, ಹೋಗುವುದು, ಪೂಜೆ, ಪುನಸ್ಕಾರ, ತೀರಾ ಪರ್ಸನಲ್‌ ಅನ್ನಿಸುವ ಹರಕೆ, ಬಯಕೆಗಳ ನಿವೇದನೆ ಎಲ್ಲವೂ ಕ್ಯಾಮೆರಾ ಕಣ್ಗಾವಲಿನಲ್ಲೇ ನಡೆಯುತ್ತವೆ. ಎಂಥಾ ತಮಾಷೆ ಗೊತ್ತಾ, ಇಡೀ ಊರು ಕಾಯುವ ನಿನ್ನನ್ನು ಕಾಯಲು ಸಿಸಿ ಕ್ಯಾಮೆರಾ!. ಆ ದಿನಗಳೂ ದೂರವಿಲ್ಲ. ಈ ಮಂತ್ರಿ ಮಹೋದಯರಿಗಿರುತ್ತದಲ್ಲಾ ಹಾಗೆ.
ಬೊಬ್ಬರ್ಯಾ, ನಿನ್ನ ಜಾತ್ರೆಯಲ್ಲಿ ಎಂಥ ಅದ್ಭುತ ಅವಕಾಶಗಳಿವೆ ಗೊತ್ತಾ, ಆದರೆ ನಿನ್ನ ಸುತ್ತಮುತ್ತಲಿನ ಬಾಡಿಗಾರ್ಡ್‌ಗಳು, ಏಜೆಂಟರು ಅದಕ್ಕೆ ಮನಸ್ಸು ಮಾಡಲೇ ಇಲ್ಲ.
ಹಾ ಕ್ಷಮೆಯಿರಲಿ, ಈಗ ಭಜನಾ ತಂಡ ಕಟ್ಟಿ ನಿನ್ನ ಮುಂದೆ ಕುಣಿಯುತ್ತಾರಲ್ಲಾ ಆ ಹುಡುಗರು ಒಂದಿಷ್ಟು ಕೆಲಸ ಮಾಡಿದ್ದಾರೆ. ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಎಂದೆಲ್ಲಾ ಏನೇನೋ ಒಂದಿಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೆ ನಿನ್ನ ಬಾಡಿಗಾರ್ಡ್‌ಗಳು, ತಲೆಮಾರಿನ ಗುತ್ತಿಗೆದಾರರಿಂದ ಪೂರ್ಣ ಪ್ರಮಾಣದ ಬೆಂಬಲ ಸಿಕ್ಕಿಲ್ಲ. ಭಜನಾ ತಂಡದ ಹಿಂದೆ ಒಂದಿಷ್ಟು ದೊಡ್ಡವರು, ಕೈ ಬಿಚ್ಚುವವರು ಇರುವುದರಿಂದ ಈ ಬಾಡಿಗಾರ್ಡ್‌ಗಳು, ಗುತ್ತಿಗೆದಾರರು ಸುಮ್ಮನಿದ್ದಾರೆ ಅಷ್ಟೆ.
ಬೊಬ್ಬರ್ಯ, ಸ್ವಲ್ಪ ಮಧ್ಯ, ಉತ್ತರ ಕರ್ನಾಟಕದ ಕಡೆಗೆ ಬಾ. ಕಷ್ಟವಾದರೆ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಧರ್ಮಸ್ಥಳದ ಜಾತ್ರೆಗಳನ್ನು ನೋಡು. ದೇಸಿ ಕ್ರೀಡೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಷ್ಟೊಂದು ಆದ್ಯತೆ ಕೊಡುತ್ತಾರೆ ಗೊತ್ತಾ. ಸ್ಥಳೀಯ ಹುಡುಗರ ತಂಡ ಕಟ್ಟಿಸಿ ಆಡಿಸುತ್ತಾರೆ, ಕುಣಿಸುತ್ತಾರೆ....
ಇಲ್ಲಿ ಎಲ್ಲವೂ ದುಡ್ಡಿನಿಂದ ಆಗುವುದಿಲ್ಲ. ದುಡ್ಡಿನ ಕೊರತೆಯೂ ನಿನಗಿಲ್ಲ. ನಿನ್ನ ಸುತ್ತಮುತ್ತಲಿನ ಹಳೇ ಹಾರ್ಡ್‌ಡಿಸ್ಕ್‌ಗಳು ಬದಲಾಗಬೇಕು. ಹೊಸ ತಲೆಮಾರುಗಳನ್ನು ಹುರಿದುಂಬಿಸುವ ಪ್ರಯತ್ನ ಆಗಬೇಕು. ಹೇಳು ಇದುವರೆಗಿನ ನಿನ್ನ ಜಾತ್ರೆಗಳಲ್ಲಿ ಇಂಥ ಒಂದಾದರೂ ಪ್ರಯತ್ನ ಆಗಿದೆಯಾ? ನಮ್ಮೂರ ಗಣೇಶೋತ್ಸವ ಮಾಡುವ ಕನಿಷ್ಠ ಕೆಲಸವನ್ನು ನಿನ್ನ ಉತ್ಸವ ಮಾಡಿದೆಯಾ? ನೀನು ಕಂಬಳ ನೋಡಲು ಹೋದಾಗ ಮೈಕ್‌ ತೆಗೆದುಕೊಂಡು ಅದೇ ಹಳೇ ಕ್ಯಾಸೆಟ್‌ ನುಡಿಸುವ ಬೊಗಳೆ ಬಾಯಿಬಡಕರು, ಹೊಸತನಕ್ಕೆ ಒಡ್ಡಿಕೊಳ್ಳದೇ ಜಡ್ಡುಗಟ್ಟಿದವರನ್ನು ನೋಡಿ ನೋಡಿ ಬೇಜಾರಾಗಿದೆ.
ಜಾತ್ರೆ, ಧರ್ಮರಕ್ಷಣೆ ಅಂದರೆ ಮತ್ತೇನು? ಇದೇ ಅಲ್ಲವೇ?
ಆದರೆ ನೀನು ನಿನ್ನ ಗುಡಿ ಒಳ್ಳೆಯದಾಯಿತು. ಅಂದರೆ ನಿನ್ನನ್ನು ಒಳ್ಳೆಯದು ಮಾಡಿದೆವು!! ಎಂದು ನಾವು ಕೊಚ್ಚಿಕೊಂಡೆವು. ಆದರೆ ನಾವು ನೈತಿಕವಾಗಿ ಕೆಟ್ಟು ಹೋಗಿದ್ದೇವೆ. ಅಧೋಗತಿಗೆ ಹೋಗುತ್ತಲೂ ಇದ್ದೇವೆ ಎಂಬುದೂ ನಿನ್ನ ಗಮನದಲ್ಲಿದೆ ಅಲ್ವಾ?
ಮುಂದಿನ ಬರಹದಲ್ಲಿ ಮತ್ತಷ್ಟು ಮಾತನಾಡುವುದಿದೆ. ನಾನು ಹೇಳಿದ್ದು ನಿನಗೇನನಿಸಿತು? ಹೋಗಲಿ ನಿನ್ನನ್ನು ನಂಬಿದ ನಿಜವಾದ ಭಕ್ತರ ಮೂಲಕವಾದರೂ ಒಂದು ಆತ್ಮಸಾಕ್ಷಿಯ comment ಹಾಕು ಪ್ಲೀಸ್‌.

                                                                                                        ಪ್ರೀತಿಯಿಂದ
                                                                                                       –ಶರತ್‌ ಹೆಗ್ಡೆ, ಕಡ್ತಲ